Connect with us

    DAKSHINA KANNADA

    ಬೆಂಗಳೂರಿನ ಕಂಬಳ ಓಟಕ್ಕೆ ಪೆಟಾ ಕೆಂಗಣ್ಣು, ಹೈಕೋರ್ಟಿಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಶಾಸಕ ಅಶೋಕ್ ರೈ..!

    ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಈ ಬಾರಿಯೂ ಕಂಬಳಕ್ಕೆ ತಯಾರಿ ನಡೆಸಿದ್ದರು. ಪೇಟಾದ ಆಕ್ಷೇಪದ ಅರ್ಜಿಯಲ್ಲಿ ತಮ್ಮನ್ನೂ ಪಾರ್ಟಿ ಮಾಡಬೇಕೆಂದು ವಕೀಲರ ಮೂಲಕ ಅಶೋಕ್ ರೈ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. 

    ಪುತ್ತೂರು :  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಬಾರಿ ಅದ್ದೂರಿಯಾಗಿ ನಡೆದಿದ್ದ  ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ  ಈ ಬಾರಿ ವಿಘ್ನ ಎದುರಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 25, 26 ರಂದು ಕಂಬಳ ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಪ್ರಾಣಿ ದಯಾ ಸಂಘ ಪೇಟಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟಿಗೆ ಸಲ್ಲಿಸಿದೆ.

     

    ಪೇಟಾ ಅರ್ಜಿಯಲ್ಲಿ “ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಂಬಳ ಸ್ಪರ್ಧೆಗೆ ಅವಕಾಶವಿದೆ. ಆದರೆ, ಕಳೆದ ವರ್ಷದಿಂದ ಅದನ್ನು ಬೆಂಗಳೂರಿನಲ್ಲಿ ಆನಂತರ ಶಿವಮೊಗ್ಗದಲ್ಲೂ ನಡೆಸುವ ಚಿಂತನೆಯನ್ನು ಕಂಬಳ ಆಯೋಜನಾ ಸಮಿತಿ ಹೊಂದಿದೆ. ಇದಕ್ಕಾಗಿ 200 ಕೋಣಗಳನ್ನು 300 ಕಿ ಮೀ ದೂರವಿರುವ ದಕ್ಷಿಣ ಕನ್ನಡದಿಂದ ಟ್ರಕ್‌ನಲ್ಲಿ ತರಲಾಗಿದೆ. ಇದಕ್ಕೆ ನಿರ್ಬಂಧ ವಿಧಿಸಬೇಕು” ಎಂದು ಕೋರಿದ್ದಾರೆ.“ಪ್ರಾಣಿ ಹಿಂಸೆ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಕರ್ನಾಟಕದಲ್ಲಿ ಕಂಬಳ, ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯಂಥ ಸಾಂಪ್ರದಾಯಿಕ ಸ್ಪರ್ಧೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಈಗ ಅದನ್ನು ವಾಣಿಜ್ಯೀಕರಣಗೊಳಿಸಲಾಗುತ್ತಿದೆ. ನ್ಯಾಯಾಲಯ ನಿರ್ಧರಿಸುವವರೆಗೆ ಕೋಣಗಳನ್ನು ಬೆಂಗಳೂರಿಗೆ ಟ್ರಕ್‌ನಲ್ಲಿ ತರದಂತೆ ಕಂಬಳ ಆಯೋಜನಾ ಸಮಿತಿಗೆ ಆದೇಶಿಸಬೇಕು” ಎಂದು ಪೇಟಾ ಉಚ್ಚ ನ್ಯಾಯಾಲಯವನ್ನು ಕೋರಿದೆ.

    ಈ ನಡುವೆ ಈ ಅರ್ಜಿಗೆ ಪ್ರತಿಯಾಗಿ ಕಂಬಳ ಹೋರಾಟಗಾರ, ಪುತ್ತೂರು ಶಾಸಕ ಅಶೋಕ್ ಕುಮಾರ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಈ ಬಾರಿಯೂ ಕಂಬಳಕ್ಕೆ ತಯಾರಿ ನಡೆಸಿದ್ದರು. ಪೇಟಾದ ಆಕ್ಷೇಪದ ಅರ್ಜಿಯಲ್ಲಿ ತಮ್ಮನ್ನೂ ಪಾರ್ಟಿ ಮಾಡಬೇಕೆಂದು ವಕೀಲರ ಮೂಲಕ ಅಶೋಕ್ ರೈ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

    ಕಂಬಳ ಕ್ರೀಡೆಯ ಕುರಿತಂತೆ ಈಗಾಗಲೇ ಸುಪ್ರೀಂಕೋರ್ಟ್ ನ ಐವರು ಸದಸ್ಯ ಪೀಠ ಹಸಿರು ನಿಶಾನೆ ತೋರಿದೆ. ಸುಪ್ರೀಂಕೋರ್ಟ್ ಗೆ ಅಂದು ಸಲ್ಲಿಸಿದ್ದ ಅಫಿದಾವಿತ್ ನಲ್ಲಿ ಕಂಬಳ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಸಲಾಗುವ ಕ್ರೀಡೆ ಎಂದು ಉಲ್ಲೇಖಿಸಲಾಗಿತ್ತು. ಆದರೆ ಆ ಅಫಿದಾವಿತ್ ನಲ್ಲಿ ದಕ್ಷಿಣಕನ್ನಡ ಮತ್ತು ಉಡುಪಿಯನ್ನು ಹೊರತುಪಡಿಸಿ ಬೇರೆ ಎಲ್ಲೂ ಕಂಬಳ ಆಯೋಜಿಸುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಆದರೆ ಫೇಟಾ ಅದೇ ವಿಚಾರವನ್ನೇ ಇಟ್ಟುಕೊಂಡು ಇದೀಗ ಹೈಕೋರ್ಟ್ ಕದ ತಟ್ಟಿದೆ.  ಆದರೆ ಪೇಟಾ್ದ ಈ ಅರ್ಜಿಗೆ ಹಿನ್ನಡೆಯಾಗಲಿದೆ ಎನ್ನುವುದು ಕಂಬಳ ಸಮಿತಿಯ ಭರವಸೆಯಾಗಿದೆ. ಆದರೆ ಈ ಎಲ್ಲವೂ  ಬುಧವಾರ ಹೈಕೋರ್ಟ್ ನೀಡುವ ತೀರ್ಪನ ಮೇಲೆ ಅವಲಂಬಿತವಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply