Connect with us

BANTWAL

ಬಂಟ್ವಾಳದಲ್ಲಿ ರಹಿಮಾನ್ ಶವಯಾತ್ರೆಗೆ ಸಾವಿರಾರು ಜನ – ರಸ್ತೆ ತಡೆದು ಆಕ್ರೋಶ

ಬಂಟ್ವಾಳ ಮೇ 28: : ನಿನ್ನೆ ಸಂಜೆ ಕೊಲೆಯಾದ ಅಬ್ದುಲ್ ರಹಿಮಾನ್ ಮೃತದೇಹ ಅವರ ಊರಾದ ಬಂಟ್ವಾಳ ತಾಲ್ಲೂಕಿನ ಕೊಳತ್ತಮಜಲುವಿಗೆ ಬುಧವಾರ ಬೆಳಿಗ್ಗೆ ಮೆರವಣಿಗೆಯಲ್ಲಿ ಸಾಗಿಸಲಾಯಿತು.


ಇದಕ್ಕೂ ಮುನ್ನ ಕುತ್ತಾರು ಮದನಿನಗರ ಮಸೀದಿಯಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿ ಬಳಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮಂಗಳೂರು ಪೊಲೀಸ್ ಕಮಿಷನರ್‌ ಅನುಪಮ್ ಅಗ್ರವಾಲ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬೇರೆ ಜಿಲ್ಲೆಗಳ ಹೆಚ್ಚುವರಿ ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ.


ಕೈಕಂಬದಲ್ಲಿ ಜನ ಜಮಾಯಿಸಿದ್ದು, ಮಳೆಯನ್ನೂ ಲೆಕ್ಕಿಸದೆ ಕಾಯುತ್ತಿದ್ದಾರೆ. ಕೈಕಂಬ ಮಸೀದಿಯಲ್ಲಿ‌ ಅಂತಿಮ‌ ದರ್ಶನ ನಡೆದ ಬಳಿಕ ಕೈಕಂಬ- ಕಲ್ಪನೆ- ಬೆಳ್ಳೂರು ಮೂಲಕ ಕೊಳತ್ತಮಜಲು ಮಸೀದಿಗೆ ಮೆರವಣಿಗೆ ಸಾಗಲಿದೆ. ಕೊಳತ್ತಮಜಲು ಮಸೀದಿಯ ದಫನ ಭೂಮಿಯಲ್ಲಿ ಪಾರ್ಥೀವ ಶರೀರದ ದಫನ ಕಾರ್ಯ ನಡೆಯಲಿದೆ. ಈ ಮಧ್ಯೆ ಫರಂಗಿಪೇಟೆ, ಕೈಕಂಬ ಪೇಟೆಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ಮುಸ್ಲಿಂ ಅಂಗಡಿಗಳು ಮುಚ್ಚಿದ್ದವು.


ಶವಯಾತ್ರೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ , ಕೈಕಂಬದಲ್ಲಿ ಬೈಕ್ ಶೋ ರೂಂ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಶವಯಾತ್ರೆ ಇದ್ದರೂ ಬಂದ್ ಮಾಡಿಲ್ಲ ಎಂದು ಆಕ್ರೋಶಗೊಂಡ ಗುಂಪು ಕಲ್ಲು ತೂರಾಟ ನಡೆಸಿದೆ. ರಹೀಂ ಪಾರ್ಥೀವ ಶರೀರ ಆಗಮಿಸುವ ಕೆಲವೇ ಹೊತ್ತಿನ ಮೊದಲು ಘಟನೆ ನಡೆದಿದೆ. ತಕ್ಷಣವೇ ಪೊಲೀಸರು ಮಧ್ಯಪ್ರವೇಶ ಮಾಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಪಾರ್ಥಿವ ಶರೀರವು ತೊಕ್ಕೊಟ್ಟು, ನಂತೂರು, ಪೊಳಲಿ ಮಾರ್ಗವಾಗಿ ಕೊಳತ್ತಮಜಲು ಗ್ರಾಮದಲ್ಲಿನ ಮನೆಗೆ ತಲುಪಲಿದೆ. ಅಲ್ಲಿನ ಮಸೀದಿಯಲ್ಲಿ ರಹೀಂ ಮೃತದೇಹದ ಅಂತಿಮ ಕ್ರಿಯೆಗಳು ನಡೆಯಲಿವೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *