ಮಂಗಳೂರು ಡಿಸೆಂಬರ್ 05: ಕಿನ್ನಿಗೋಳಿ ಪರಿಸರದ ವೃದ್ದ ದಂಪತಿಯನ್ನು ಡಿಜಿಟಲ್ ಅರೆಸ್ಟ್ ವಂಚನೆಯಿಂದ ಪಾರು ಮಾಡಿದ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯಿಸ್ಟನ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.


ದಾಮಸ್‌ ಕಟ್ಟೆ ಕೊಬ್ಬೆಟ್ಟಿನ ಬೆನೆಡಿಕ್ಟ್ ಫರ್ನಾಂಡಿಸ್‌ (86)– ಲಿಲ್ಲಿ ಫರ್ನಾಂಡಿಸ್‌ (71) ದಂಪತಿಗೆ ವಿಡಿಯೊ ಕರೆ ಮಾಡಿದ್ದ ವಂಚಕರು, ತಮ್ಮನ್ನು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ‘ಮುಂಬೈನಲ್ಲಿ ಬ್ಯಾಂಕ್ ಖಾತೆಯಿಂದ ನೀವು ₹ 6 ಕೋಟಿ ಹಣ ಪಡೆದಿದ್ದೀರಿ’ ಎಂದು ಹೇಳಿ ವೃದ್ಧ ದಂಪತಿಯ ನಕಲಿ ಆಧಾರ್ ಕಾರ್ಡ್ ತೋರಿಸಿದ್ದರು. ‘ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದ್ದು, ಮನೆಯಿಂದ ಹೊರ ಹೋಗುವಂತಿಲ್ಲ. ನಮ್ಮ ಸಿಬ್ಬಂದಿ ನಿಮ್ಮನ್ನು ಶೂಟ್ ಮಾಡುತ್ತಾರೆ. ಕೆನರಾ ಬ್ಯಾಂಕಿನ ಕಿನ್ನಿಗೋಳಿಯ ಶಾಖೆಯಲ್ಲಿ ನಿಮ್ಮ ಖಾತೆಯಲ್ಲಿರುವ ₹ 84 ಲಕ್ಷವನ್ನು ನಾವು ಸೂಚಿಸುವ ಖಾತೆಗೆ ವರ್ಗಾಯಿಸಬೇಕು ಎಂದು ಬೆದರಿಕೆ ಹಾಕಿದ್ದರು.

ಬಳಿಕ ದಂಪತಿ ಕಿನ್ನಿಗೋಳಿಯ ಕೆನರಾ ಬ್ಯಾಂಕ್ ಶಾಖೆಗೆ ತೆರಳಿ ಹಣ ವರ್ಗಾವಣೆಗೆ ಮ್ಯಾನೆಜರ್ ಹತ್ತಿರ ಹೇಳಿದ್ದರು, ಆದರೆ ಮ್ಯಾನೇಜರ್ ರಾಯಿಸ್ಟನ್ ಅನುಮಾನದ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು, ಬಳಿಕ ತನಿಖೆ ನಡೆಸಿದಾಗ ವೃದ್ದ ದಂಪತಿ ಡಿಜಿಟಲ್ ಅರೆಸ್ಟ್ ಆಗಿರುವುದು ತಿಳಿದು ಬಂದಿತ್ತು. ಬಳಿಕ ಹಣ ವರ್ಗಾವಣೆ ಆಗದಂತೆ ತಡೆಯಲಾಗಿತ್ತು.

ಇದೀಗ ವೃದ್ದ ದಂಪತಿಯ ಹಣವನ್ನು ವಂಚಕರ ಕೈಗೆ ಸಿಗದಂತೆ ತಡೆದ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯಿಸ್ಟನ್ ರವರ ಸಕಾಲಿಕ ಸಮಯ ಪ್ರಜ್ಞೆಗೆ ಅಭಿನಂದನೆಗಳು ಜನರು ಹೇಳಿದ್ದಾರೆ, ಕಾಂಗ್ರೇಸ್ ಮುಖಂಡ ಮಿಥುನ್ ರೈ, ಶಾಸಕ ಉಮಾನಾಥ ಕೊಟ್ಯಾನ್ ರಾಯಿಸ್ಟನ್ ಅವರನ್ನು ಅಭಿನಂದಿಸಿದ್ದಾರೆ.

Share Information