ಮಂಗಳೂರು ಅಗಸ್ಟ್ 21: ಬೆೇಕರಿ ಅಂಗಡಿ ಮಾಲಿಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರು ಸಮೀಪದ ಶಾಂತಿ ಭಾಗ್ ಎಂಬಲ್ಲಿ ನಡೆದಿದೆ.ಮೃತರನ್ನು ಹಾಸನ ಜಿಲ್ಲೆ ಹಳೇಬೀಡು ರಸ್ತೆಯ ಬಲ್ಲೇನಹಳ್ಳಿ ನಿವಾಸಿ ರುದ್ರೇಶ್ (36) ಎಂದು ಗುರುತಿಸಲಾಗಿದ್ದು, ಇವರು ಪತ್ನಿ, ಮಕ್ಕಳೊಂದಿಗೆ ಶಾಂತಿಬಾಗ್ ಬಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ರುದ್ರೇಶ್ ಅವರು ಕುತ್ತಾರು ಹಾಗೂ ಯೆನೆಪೋಯ ಆಸ್ಪತ್ರೆ ಬಳಿ ಬೆಂಗಳೂರ್ ಅಯ್ಯಂಗಾರ್ ಬೇಕರಿಯನ್ನು ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಬೇಕರಿಯಿಂದ ಮನೆಗೆ ಚಹಾ ಕುಡಿಯಲೆಂದು ಬಂದವರು ವಾಪಸ್ಸು ಹೋಗಿರಲಿಲ್ಲ. ಮನೆಯಲ್ಲಿ ಪತಿ ರುದ್ರೇಶ್ ಒಂದು ಕೋಣೆಯಲ್ಲಿ ಮಲಗಿದ್ದರೆ, ಪತ್ನಿ ಹೇಮಲತಾ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಸಂಜೆ ಪತ್ನಿ ಹೇಮಲತಾ ನಿದ್ರೆಯಿಂದ ಎದ್ದಾಗ ಪತಿ ಏಳದೇ ಇರುವುದನ್ನು ಗಮನಿಸಿ ಬಾಗಿಲು ಮುರಿದು ನೋಡಿದಾಗ ರುದ್ರೇಶ್ ಕೋಣೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರುದ್ರೇಶ್ ಹೃದಯ ಸಂಬಂಧಿ ಕಾಯಿಲೆಗೆ ಆಗಾಗ್ಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಪತ್ನಿ ಹೇಮಲತಾ ಕೆಲ ದಿನಗಳ ಹಿಂದೆಯಷ್ಟೇ ಕಿವಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.