LATEST NEWS
ಹಿಂದೂ ಸಂಘಟನೆಯ ನಾಯಕರನ್ನು ಧಮನಿಸಲು ಪ್ರಯತ್ನಿಸಿದರೆ, ತಕ್ಕ ಉತ್ತರ – ಪುನೀತ್ ಅತ್ತಾವರ

ಮಂಗಳೂರು ಅಕ್ಟೋಬರ್ 19 : ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ವ್ಯಾಪಾರ ಧರ್ಮದಂಗಲ್ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ಕೋಮು ಸಾಮರಸ್ಯಕ್ಕೆ ಧಕ್ಕೆ ತಂದ ಆರೋಪದ ಮೇಲೆ ನಗರ ದಕ್ಷಿಣ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಲಾಗಿದ್ದು, ಇದನ್ನು ಖಂಡಿಸಿರುವ ವಿಎಚ್ ಪಿ ಹಿಂದೂ ಸಂಘಟನೆಯ ನಾಯಕರನ್ನು ಧಮನಿಸಲು ಪ್ರಯತ್ನಿಸಿದರೆ, ತಕ್ಕ ಉತ್ತರ ಕೊಡಲಾಗುವುದು’ ಎಂದು ಎಚ್ಚರಿಕೆ ನೀಡಿದೆ.
ಬಜರಂಗದಳದ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು ಅದರಲ್ಲಿ ಮುಸ್ಲಿಮರ ಓಲೈಕೆ ಸಲುವಾಗಿ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಿಸಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಇದನ್ನು ಬಜರಂಗದಳ ಬಲವಾಗಿ ಖಂಡಿಸುತ್ತದೆ’ ಎಂದು ತಿಳಿಸಿದ್ದಾರೆ.

‘ಧಾರ್ಮಿಕ ದತ್ತಿಇಲಾಖೆಯ ನಿಯಮಗಳ ಪ್ರಕಾರ ದೇವಸ್ಥಾನದ ವಠಾರ ಮತ್ತು ರಥಬೀದಿಯಲ್ಲಿ ಹಿಂದುಯೇತರರು ವ್ಯಾಪಾರ ನಡೆಸುವುದಕ್ಕೆ ಅವಕಾಶವಿಲ್ಲ. ಹಾಗಾಗಿ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಹಿಂದೂ ವ್ಯಾಪಾರಿಗಳ ಬೆಂಬಲಕ್ಕೆ ನಿಂತ ಶರಣ್ ಪಂಪ್ವೆಲ್ ವಿರುದ್ಧ ಹಾಕಿರುವ ಸುಳ್ಳು ಪ್ರಕರಣವನ್ನು ತಕ್ಷಣ ಹಿಂಪಡೆಯಬೇಕು‘ ಎಂದು ಅವರು ಒತ್ತಾಯಿಸಿದ್ದಾರೆ.