DAKSHINA KANNADA
ಕರಾವಳಿಯಾದ್ಯಂತ ಆಟಿ ಅಮಾವಾಸ್ಯೆಯ ಸಂಭ್ರಮ – ನರಹರಿ ಬೆಟ್ಟದಲ್ಲಿ ಭಕ್ತರ ದಂಡು

ಪುತ್ತೂರು ಜುಲೈ 24: ಆಟಿಯ ಅಮಾವಾಸ್ಯೆ ಅಥವಾ ಆಟಿ ಅಮಾಸೆ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯನ್ನು ಒಳಗೊಂಡಿರುವ ತುಳುನಾಡಿನ ಆಚರಣೆ. ಆಟಿ ತಿಂಗಳು ಎಂದೇ ಹೇಳಲಾಗುವ ಈ ತಿಂಗಳಲ್ಲಿ ಅಮವಾಸ್ಯೆಯಂದು ತೀರ್ಥಸ್ನಾನ ಮಾಡಿದರೆ, ಪುಣ್ಯಪ್ರಾಪ್ತಿ, ಸಕಲ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ನರಹರಿ ಬೆಟ್ಟದ ತುದಿಯಲ್ಲಿರುವ ಸದಾಶಿವ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ತೀರ್ಥಸ್ನಾನ ಮಾಡಿದ್ದಾರೆ.
ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ನಾನಾ ಶಿವ ಸನ್ನಿಧಿಗಳಲ್ಲಿರುವ ಪುಷ್ಕರಿಣಿಗಳಲ್ಲಿ ತೀರ್ಥ ಸ್ನಾನದ ಸಂಭ್ರಮ ಐತಿಹಾಸಿಕ ಹಿನ್ನೆಲೆ ಇರುವ ಮಹತೋಭಾರ ಕಾರಿಂಜ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನಕ್ಕೆ ವಿಶೇಷ ಮನ್ನಣೆ. ಇಂದು ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ನರಹರಿ ಬೆಟ್ಟದ ತುದಿಯಲ್ಲಿರುವ ಸದಾಶಿವ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಕ್ಷೇತ್ರದಲ್ಲಿರುವ ಶಂಖ, ಚಕ್ರ, ಗಧಾ, ಪದ್ಮ ಎನ್ನುವ ನಾಲ್ಕು ನೀರಿನ ಕುಂಡಗಳಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಕ್ಷೇತ್ರಕ್ಕೆ ಸಾವಿರರು ಜನ ಭಕ್ತರು ಆಗಮಿಸಿದ್ದಾರೆ. ಇಲ್ಲಿ ಪುಣ್ಯಸ್ನಾನ ನೆರವೇರಿಸಿದಲ್ಲಿ ಪಾಪ ಪರಿಹಾರವಾಗುತ್ತದೆ ಎನ್ನುವ ಪ್ರತೀತಿ ಇದೆ.
ಸಮುದ್ರ ಮಟ್ಟದಿಂದ ಸಾವಿರ ಆಡಿ ಎತ್ತರದ ಪ್ರಕೃತಿ ಸೌಂದರ್ಯದ ಮಡಿಲು. ಭೂಲೋಕದ ಕೈಲಾಸ ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ಪವಿತ್ರ ತೀರ್ಥಸ್ನಾನ ನಡೆಯಿತು. ಸರ್ವರೋಗ ನಿವಾರಕ ಎಂಬ ನಂಬಿಕೆಯಿಂದ ಏಳು ಎಲೆಗಳ ವೃತ್ತಾಕಾರದ ಜೋಡಣೆಯ ಸಪ್ತವರ್ಣ ಪಾಲೆಯ ಮರದ ರಸವನ್ನು ಸೂರ್ಯೋದಯದ ಮೊದಲು ಸೇವಿಸುವ ತುಳುನಾಡಿನ ಪರಂಪರೆಯ ದಿನ ಆಟಿ ಅಮಾವಾಸ್ಯೆ ಪವಿತ್ರವಾಗಿದ್ದು ಮುಂಜಾನೆಯೇ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗಧಾ, ಪದ್ಮ ಗಳೆಂಬ ನಾಲ್ಕು ಕೂಪಗಳಲ್ಲಿ ಮಿಂದು ವಿನಾಯಕ ಸದಾಶಿವ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.