DAKSHINA KANNADA
ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ – ಕ್ಷಮೆ ಕೇಳಿದ ಆರ್.ಅಶೋಕ್

ಬೆಂಗಳೂರು ಫೆಬ್ರವರಿ 23 : ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುವಾಗ ಮಂಗಳೂರಿನ ಪಬ್ ದಾಳಿ ಪ್ರಕರಣದಲ್ಲಿನಾನು ಬಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎನ್ನುವ ಹೇಳಿಕೆ ನೀಡಿದ್ದಕ್ಕಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕ್ಷಮೆ ಯಾಚಿಸಿದ್ದಾರೆ.
ಸದನದಲ್ಲಿ ಅಶೋಕ್ ನೀಡಿದ್ದ ಹೇಳಿಕೆ ಖಂಡಿಸಿ ವಿಹೆಚ್ಪಿ ಕಾರ್ಯದರ್ಶಿ ಶರಣ್ ಪಂಪ್ವೆಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ದೂರು ನೀಡಿದರು. ಅಶೋಕ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಇದರ ಬೆನ್ನಲ್ಲೇ ಅಶೋಕ್ ಮಾಧ್ಯಮಗಳ ಮುಂದೆ ಕ್ಷಮೆ ಯಾಚಿಸಿದ್ದಾರೆ. “ನಾನೂ ಕೂಡ ಬಜರಂಗದಳದ ಕಾರ್ಯಕರ್ತನಾಗಿದ್ದವನು, ನನ್ನ ಹೇಳಿಕೆಯಿಂದ ಬಜರಂಗದಳದವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ” ಎಂದರು.

“ರಾಮನಗರ ಮುಸ್ಲಿಂ ಲಾಯರ್, ಜ್ಞಾನವಾಪಿ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಸದನದಲ್ಲಿ ಪ್ರಶ್ನೆ ಮಾಡಿದ್ದೆ. ಮಂಗಳೂರಿನ ಶಿಕ್ಷಕಿ ರಾಮನ ಬಗ್ಗೆ ಅವಹೇಳನವಾಗಿ ಹೇಳಿದ್ದನ್ನು ಪ್ರಸ್ತಾಪಿಸಿದ್ದೆ, ಆ ಸಂದರ್ಭದಲ್ಲಿ ನಾನೂ ಕೂಡ ಗೃಹಸಚಿವ ಆಗಿದ್ದವನು. ನಾನೂ ಕೂಡ ಬಜರಂಗದಳ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದೆ ಅಂತ ಹೇಳಿದ್ದೆ. ಅದು ಬಜರಂಗದಳದವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನೂ ಕೂಡ ಹತ್ತು ವರ್ಷ ಬಜರಂಗದಳದ ಕಾರ್ಯಕರ್ತ ಆಗಿದ್ದೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದರು.