LATEST NEWS
ಅಮಲು ವಿಚಾರಣೆಗೆ ಹಾಜರಾಗುವುದಾಗಿ ಹೇಳಿ ತಲೆಮರೆಸಿಕೊಂಡಳೇ ಆಂಕರ್ ಅನುಶ್ರೀ….?
ಮಂಗಳೂರು ಸೆಪ್ಟೆಂಬರ್ 25: ಬಾಲಿವುಡ್ ನಿಂದ ಆರಂಭಗೊಂಡ ಡ್ರಗ್ಸ್ ಪ್ರಕರಣ ಸ್ಯಾಂಡಲ್ ವುಡ್ ನಲ್ಲೂ ತನ್ನ ಜಾಲ ಹರಡಿದೆ. ಸ್ಯಾಂಡಲ್ ವುಡ್ ನ ಖ್ಯಾತ ನಟಿಯರಾದ ಸಂಜನಾ ಮತ್ತು ರಾಗಿಣಿ ದ್ವಿವೇದಿ ಈಗಾಗಲೇ ಡ್ರಗ್ಸ್ ಜಾಲದ ಹಿನ್ನಲೆಯಲ್ಲಿ ಜೈಲು ಪಾಲಾಗಿದ್ದರೆ, ಇನ್ನೂ ಕೆಲವರು ಜೈಲು ಪಾಲಾಗುವ ಹಂತದಲ್ಲಿದ್ದಾರೆ.
ಈ ನಡುವೆ ಮಂಗಳೂರಿನಲ್ಲಿ ಪೋಲೀಸರಿಗೆ ಸೆರೆಯಾದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಈತನ ಸಹಚರ ಅಕೀಲ್ ನೌಶೀದ್ ಬಂಧನದ ಬಳಿಕ ಡ್ರಗ್ಸ್ ನ ಜಾಲದಲ್ಲಿ ಮಂಗಳೂರು ಮೂಲದ ನಟಿ ಕಂ ಆ್ಯಂಕರ್ ಅನುಶ್ರೀ ಹೆಸರು ಹೇಳಿ ಬಂದಿತ್ತು. ಡ್ಯಾನ್ಸರ್ ಕಂ ನಟನಾಗಿರುವ ಕಿಶೋರ್ ಶೆಟ್ಟಿಗೆ ಡ್ರಗ್ಸ್ ಡೀಲ್ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದ ತರುಣ್ ಎಂಬಾತನನ್ನೂ ಇದೀಗ ಪೋಲೀಸರು ಬಂಧಿಸಿದ್ದಾರೆ. ಅಲ್ಲದೆ ಕಿಶೋರ್ ಶೆಟ್ಟಿ ಸ್ನೇಹಿತೆ ಮಣಿಪುರ ಮೂಲದ ಯುವತಿ ಆಸ್ಕಾ ಳನ್ನೂ ಪೋಲೀಸರು ಈಗಾಗಲೇ ಬಂಧಿಸಿದ್ದಾರೆ.
ಈ ನಡುವೆ ತರುಣ್ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತನಿಗೆ ಅನುಶ್ರೀ ಜೊತೆ ಹೆಚ್ಚಿನ ನಂಟಿರುವ ವಿಚಾರ ತಿಳಿದುಬಂದಿದೆ. ಈತನೊಂದಿಗೆ ಅನುಶ್ರೀ ವಾಟ್ಸ್ ಅಪ್ ಚಾಟ್ ಮಾಡಿರುವುದು, ಈತ ಕೂಡಾ ಡ್ಯಾನ್ಸರ್ ಆಗಿರುವ ಕಾರಣ ಅನುಶ್ರೀಗೆ ಈತನ ಪರಿಚಯ ಈ ಹಿಂದೆಯೇ ಇರುವ ಬಗ್ಗೆಯೂ ಪೋಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಕಾರಣಕ್ಕಾಗಿ ಅನುಶ್ರೀಗೆ ಪೋಲೀಸ್ ವಿಚಾರಣೆಗೆ ಬರುವಂತೆ ಮಂಗಳೂರು ಸಿಸಿಬಿ ಪೋಲೀಸರು ನೋಟೀಸ್ ನೀಡಿದ್ದರು.
ಇಂದೇ ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವುದಾಗಿ ಪೋಲೀಸರಿಗೆ ತಿಳಿಸಿದ್ದ ಅನುಶ್ರೀ ಈವರೆಗೂ ಮಂಗಳೂರಿಗೆ ಆಗಮಿಸಿಲ್ಲ. ಈ ನಡುವೆ ಅನುಶ್ರೀ ಉದ್ಧೇಶಪೂರ್ವಕವಾಗಿಯೇ ವಿಚಾರಣೆಗೆ ಬರದೆ ತಪ್ಪಿಸಿಕೊಂಡರೇ ಎನ್ನುವ ಅನುಮಾನಗಳೂ ಮೂಡಲಾರಂಭಿಸಿದೆ. ತರುಣ್ ಜೊತೆಗೆ ಅನುಶ್ರೀ ಗೆ ಇರುವ ನಂಟಿನ ಸಾಕ್ಷಾಧಾರಗಳೂ ಮಂಗಳೂರು ಪೋಲೀಸರ ಬಳಿ ಇರುವ ಕಾರಣ, ಬಂಧನದ ಭೀತಿ ಕಾಡಿದ ಪರಿಣಾಮ ಅನುಶ್ರೀ ವಿಚಾರಣೆಯಿಂದ ದೂರ ಉಳಿಯಲು ಕಾರಣವಿರುವ ಸಾಧ್ಯತೆಯೂ ಇದೆ.
ಇನ್ನು ಅನುಶ್ರೀ ವಿಚಾರಣೆಗೆ ಹಾಜರಾಗದ ಹಿನ್ನಲೆ ಉಳಿದ ಆರೋಪಿಗಳನ್ನು ಇಂದು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳ ಹಾಜರು ಪಡಿಸಲಾಗಿದೆ.
You must be logged in to post a comment Login