Connect with us

    LATEST NEWS

    ಕಾಮುಕ ಬಾವನ ವಕ್ರದೃಷ್ಟಿಗೆ ಬಿದ್ದ ನಾದಿನಿ ತನಗೆ ಸಿಗದವಳನ್ನು ಯಾರೂ ನೋಡಬಾರದು ಎಂದು ಆ್ಯಸಿಡ್ ಎರಚಿದ ಕಾಮುಕ…!

    ಕಾಮುಕ ಬಾವನ ವಕ್ರದೃಷ್ಟಿಗೆ ಬಿದ್ದ ನಾದಿನಿ ತನಗೆ ಸಿಗದವಳನ್ನು ಯಾರೂ ನೋಡಬಾರದು ಎಂದು ಆ್ಯಸಿಡ್ ಎರಚಿದ ಕಾಮುಕ…!

    ಮಂಗಳೂರು ಜನವರಿ 25: ಕಾಮುಕ ಭಾವನ ವಕ್ರದೃಷ್ಟಿಗೆ ಸಿಲುಕಿ ನಾದಿನಿಯೊಬ್ಬಳು ಜೀವನ್ಮರಣ ಸ್ಥಿತಿಯಲ್ಲಿ ಹೋರಾಡಬೇಕಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಡಬ ತಾಲೂಕಿನ ಕೋಡಿಬಾಳದಲ್ಲಿ ಈ ಘಟನೆ ನಡೆದಿದೆ.

    ತಮ್ಮನ ಪತ್ನಿಯ ಮೇಲೆ ಹಲವಾರು ವರ್ಷಗಳಿಂದ ಕಣ್ಣು ಹಾಕುತ್ತಿದ್ದ ಭಾವಾ ಇದೀಗ ತನಗೆ ಆಕೆ ಸಿಗುವುದಿಲ್ಲ ಎಂದು ತಿಳಿದಾಗ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ. ದಾಳಿಯಿಂದ ನಾದಿನಿಯ ಮುಖ ಸಂಪೂರ್ಣ ಸುಟ್ಟುಹೋಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಈ ಘಟನೆ ನಡೆದಿದ್ದು, ಜನವರಿ 22 ರಂದು ಈ ಘಟನೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕೋಡಿಂಬಾಳದ ನಿವಾಸಿ ಸ್ವಪ್ನಾ ತನ್ನ ಪತಿಯಾದ ರವಿ ಮನೆಯಲ್ಲಿ ಕಳೆದ ತನ್ನ ಪಾಡಿಗೆ ಜೀವನ ಸಾಗಿಸುತ್ತಿದ್ದರು. ಪತಿ ರವಿ ಆನಾರೋಗ್ಯದ ಕಾರಣ ಒಂದೂವರೆ ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಸ್ವಪ್ನಾ ಹಾಗೂ ಆಕೆಯ ಮೂವರು ಪುಟ್ಟು ಹೆಣ್ಣು ಮಕ್ಕಳು ಗಂಡನ ಮನೆಯಲ್ಲೇ ವಾಸವಾಗಿದ್ದರು.

    ಆದರೆ ಸ್ವಪ್ನಾ ಮೇಲೆ ರವಿಯ ಅಣ್ಣ ಎಲ್.ಐ.ಸಿ ಏಜೆಂಟ್ ಎಂದು ಗುರುತಿಸಿಕೊಂಡಿರುವ ಜಯಾನಂದನಿಂದ ಯಾವಾಗಲೂ ಕಣ್ಣಿತ್ತು. ಆಕೆಯನ್ನು ತನ್ನವಳನ್ನಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ನಿರಂತರವಾಗಿ ಆಕೆಗೆ ಲೈಂಗಿಕ ಕಿರುಕುಳವನ್ನು ನೀಡುತ್ತಿದ್ದ. ಆದರೆ ಆಕೆ ಮಾತ್ರ ಈತನ ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿರಂತರವಾಗಿ ಜಯಾನಂದನ್ನು ದೂರು ಇಡುವಂತಹ ಪ್ರಯತ್ನದಲ್ಲೇ ನಿರತಳಾಗಿದ್ದಳು. ಇದರ ಜೊತೆಗೆ ಸ್ವಪ್ನಾ ತನ್ನ ಗಂಡನ ಜಮೀನಿನಲ್ಲಿ ನೆಡಲಾಗಿದ್ದ ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿರುವುದು ಜಯಾನಂದನಿಗೆ ಸಹಿಸಲಾಗಲಿಲ್ಲ. ತನ್ನ ಜೊತೆ ಸಹಕರಿಸದವಳು ಅಡಿಕೆಯನ್ನು ಕೊಯ್ಯಬಾರದು ಎಂದು ಪಟ್ಟು ಹಿಡಿದಿದ್ದ ಜಯಾನಂದ ಆಕೆಯೊಂದಿಗೆ ವೈಮನಸ್ಸನ್ನೂ ಕಟ್ಟಿಕೊಂಡಿದ್ದ.

    ಬುಧವಾರ ಇದೇ ವಿಚಾರವಾಗಿ ಜಯಾನಂದ ಸ್ವಪ್ನಾ ಮನೆಗೆ ಬಂದಿದ್ದು, ಮಾತಿಗೆ ಮಾತು ಬೆಳೆದು ರಬ್ಬರ್ ಶೀಟ್ ತಯಾರಿಸಲು ಉಪಯೋಗಿಸುವ ಆ್ಯಸಿಡ್ ಅನ್ನು ಸ್ವಪ್ನಾ ಮುಖ ಹಾಗೂ ದೇಹಕ್ಕೆ ಎರಚಿದ್ದಾನೆ. ಸ್ವಪ್ನಾ ಕಂಕುಳಲ್ಲಿದ್ದ ಎರಡು ವರ್ಷದ ಪುಟ್ಟ ಕಂದಮ್ಮಳ ಮೇಲೂ ಆ್ಯಸಿಡ್ ಎರಚಿದ ಜಯಾನಂದ ಬಳಿಕ ತಲೆ ಮರೆಸಿಕೊಂಡಿದ್ದ. ಈ ವಿಚಾರವಾಗಿ ಸ್ವಪ್ನಾ ಸಂಬಂಧಿಕರು ಕಡಬ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಜಯಾನಂದ ಕೊಂಚ ಹಣದಲ್ಲಿ ಪ್ರಭಾವಿಯಾದ ಕಾರಣ ಕಡಬ ಪೋಲೀಸರು ಪ್ರಕರಣವನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎನ್ನುವ ಆರೋಪ ಸ್ವಪ್ನಾ ಸಂಬಂಧಿಕರದ್ದಾಗಿದೆ. ಆದರೆ ಘಟನೆಯು ಮಾಧ್ಯಮಗಳ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೋಲೀಸರು ಜಯಾನಂದನ್ನು ಬಂಧಿಸಿದ್ದಾರೆ.

    ಜಯಾನಂದ ಒರ್ವ ಪಕ್ಕಾ ಕ್ರಿಮಿನಲ್ ರೀತಿಯಲ್ಲಿ ಸ್ವಪ್ನಾಳನ್ನು ಪಡೆಯಲು ಹವಣಿಸುತ್ತಿದ್ದ. ತನ್ನ ತಮ್ಮ ರವಿ ಸಾವನ್ನಪ್ಪಿದ ಬಳಿಕ ಪ್ರತಿದಿನವೂ ಸ್ವಪ್ನಾ ಮನೆಯಲ್ಲಿ ಹಾಜರಾಗುತ್ತಿದ್ದ ಜಯಾನಂದ ಆಕೆಯ ಮೈ ಮುಟ್ಟುವ, ಆಕೆಯ ಓಲೈಸುವ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದ. ಆದರೆ ಇದರಿಂದ ರೊಚ್ಚಿಗೆದ್ದಿದ್ದ ಸ್ವಪ್ನಾ ಜಯಾನಂದನ ಕಾಟವನ್ನು ಆತನ ಪತ್ನಿಯ ಗಮನಕ್ಕೂ ತಂದಿದ್ದಳು.

    ಆದರೆ ಅಲ್ಲಿಂದಲೂ ಯಾವುದೇ ಪರಿಹಾರ ದೊರೆಯದ ಹಿನ್ನಲೆಯಲ್ಲಿ ಮನೆಯಲ್ಲಿ ಮೂರು ನಾಯಿ ಮರಿಗಳನ್ನು ಸಾಕುವ ಮೂಲಕ ಮನೆಗೆ ಯಾರೂ ಬರದ ರೀತಿಯಲ್ಲಿ ತನ್ನದೇ ರೀತಿಯ ರಕ್ಷಣೆ ಮಾಡಿಕೊಂಡಿದ್ದಳು. ಆದರೆ ನಾಯಿಗಳಿಂದಾಗಿ ಮನೆಗೆ ಬರಲು ತೊಂದರೆಯಾಗುತ್ತಿದೆ ಎಂದು ಅರಿತ ಈ ಕಾಮುಕ ಏಜೆಂಟ್ ಒಂದೊಂದೇ ನಾಯಿ ಮರಿಗಳನ್ನ ವಿಷ ಹಾಕಿ ಕೊಂದಿದ್ದಾನೆ ಎನ್ನುವ ಆರೋಪವೂ ಇದೆ.

    ಜೀವನ್ಮರಣ ಹೋರಾಟದಲ್ಲಿ ಸ್ವಪ್ನಾ ಇದೀಗ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಪುಟ್ಟ ಹೆಣ್ಣು ಮಕ್ಕಳು ಅಮ್ಮ ಚೇತರಿಸಿಕೊಂಡು ಯಾವಾಗ ಬರುತ್ತಾಳೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply