ಉಡುಪಿ, ಜನವರಿ 03: ಅದೃಷ್ಟ ಅನ್ನೋದು ಯಾವ ಯಾವ ರೂಪದಲ್ಲಿ ಬರುತ್ತದೋ ಎಂದು ಊಹಿಸಲೂ ಸಾಧ್ಯವಿಲ್ಲ. ಅದೇ ರೀತಿಯ ಅದೃಷ್ಟವೊಂದು ಉಡುಪಿ ಜಿಲ್ಲೆಯ ಹೆಜಮಾಡಿ‌ ಕಡಲ ತೀರದ ಜನರಿಗೆ ಬಂದಿದೆ.

ಹೌದು ಜನವರಿ 2 ರಂದು ಹೆಜಮಾಡಿದ ಕಡಲ ತೀರದಲ್ಲಿ ತಿರುಗಾಡುತ್ತಿದ್ದ ಜನರ ಮೇಲೆಲ್ಲಾ ಒಮ್ಮೆಗೇ ಲಕ್ಷಾಂತರ ಸಂಖ್ಯೆಯ ಮೀನಿಗಳ ರಾಶಿಯೇ ಬಂದು‌ ಬಿದ್ದಿದೆ. ಮೀನನ್ನು ಕಂಡು ಖುಷಿಗೊಂಡ ಜನ ಮುಗಿಬಿದ್ದು,‌ಸಿಕ್ಕಿ ಸಿಕ್ಕಿದಕ್ಕೆ ಮೀನನ್ನು ತುಂಬಿಸಿ ಮನೆಗೆ ಒಯ್ದಿದ್ದಾರೆ.

ಹೆಜಮಾಡಿಯ ಸ್ಥಳೀಯ ಮೀನಿಗಾರರು ಕೈರಂಪಣಿ‌ ಮೂಲಕ ಸಮುದ್ರಕ್ಕೆ ಬಲೆ ಬೀಸಿದ ಸಂದರ್ಭದಲ್ಲಿ ಸಮುದ್ರದಲ್ಲಿದ್ದ ಮೀನುಗಳೆಲ್ಲಾ ನೇರವಾಗಿ ತೀರದತ್ತ ಜಿಗಿದಿದೆ. ಬಲೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕೆ‌ ತೀರದ ಕಡೆಗೆ ನುಗ್ಗಿದ ಮೀನುಗಳನ್ನು ಹೆಕ್ಕಲು ಜನ ಮುಗಿ ಬಿದ್ದಿದ್ದಾರೆ. ಸ್ಥಳೀಯವಾಗಿ ಬೂತಾಯಿ‌ ಎನ್ನುವ ಹೆಸರಿನಲ್ಲಿ ಗುರುತಿಸಿಕೊಂಡ ಈ‌ ಮೀನುಗಳನ್ನು ಸಂಗ್ರಹಿಸಿದ ಸ್ಥಳೀಯರಿಗೆ ಮೀನಿನ ಸುಗ್ಗಿ ಬಂದಂತಾಗಿತ್ತು.

ಬೂತಾಯಿ ಮೀನು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸಿಗುವ ಮೀನಾಗಿದ್ದು, ಈ ಮೀನು ಬಹಳಷ್ಟು ರುಚಿಕರವಾದ ಮೀನು ಎನ್ನುವ ಹೆಸರನ್ನೂ ಗಳಿಸಿಕೊಂಡಿದೆ. ಅಲ್ಲದೆ ಈ ಮೀನಿನಲ್ಲಿ ಕೆಲವೊಂದು ಔಷಧೀಯ‌ ಗುಣಗಳನ್ನೂ ಹೊಂದಿದ್ದು, ಬೂತಾಯಿ ಎಣ್ಣೆ ಮತ್ತು ಅದರಿಂದ ಪೌಷ್ಟಿಕಾಂಧಯುಕ್ತ ಮಾತ್ರೆಗಳನ್ನೂ ಮಾಡಲಾಗುತ್ತದೆ.

ಕೈಗೆ ಸಿಕ್ಕಿದ ಮೀನನ್ನು ಬಾಜಿಕೊಂಡು ಹೋಗುವ ಸ್ಥಳೀಯ ನಿವಾಸಿಗಳ ಮನೆಯಲ್ಲೆಲ್ಲಾ ಬೂತಾಯಿ ಮೀನಿನ ಪದಾರ್ಥದದ್ದೇ ಮಾತುಗಳು ಕೇಳಿ ಬಂದಿದೆ. ತೀರಕ್ಕೆ ಬಂದ ಮೀನುಗಳನ್ನು ಸ್ಥಳೀಯರು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share Information