ಸುಳ್ಯ , ಜುಲೈ 18: ಪ್ರೀತಿಗೆ ದೇಶದ ಗಡಿ, ಭಾಷೆ, ಸಂಸ್ಕೃತಿಯ ಅಂತರ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದ ಈ ವಿವಾಹವೇ ನೈಜ ನಿದರ್ಶನ. ಕೃಷ್ಣ ಭಕ್ತಿಯ ಮೂಲಕ ಪರಿಚಯವಾದ ಸುಳ್ಯದ ಯುವಕ ಹಾಗೂ ಅಮೆರಿಕದ ಯುವತಿ ಈಗ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಅವರು ಅಮೆರಿಕದ ಚಿಕಾಗೋ ನಿವಾಸಿ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಅವರನ್ನು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ಪ್ರೀತಿ ಹುಟ್ಟಿದ್ದೇಗೆ?
ಸಾಯಿ ಸಂಕೇತ್ ಅವರು ಮಡಿಕೇರಿ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಚೆನ್ನೈ ಐಐಟಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. ಬಳಿಕ ಬೆಂಗಳೂರಿನಲ್ಲಿ ಎರಡು ವರ್ಷ ಉದ್ಯೋಗ ನಿರ್ವಹಿಸಿ, ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ಆರಂಭಿಸಿದರು. ಅದೇ ಸಮಯದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಮೆರಿಕದ ಶಾನೋನ್, ಮಾಯಾಪುರದಲ್ಲಿ ನೆಲೆಸಿ ಆನ್ಲೈನ್ ವೃತ್ತಿ ನಡೆಸುತ್ತಿದ್ದರು. ಸಂಕೇತ್ ಅವರ ಉದ್ಯಮ ಮಳಿಗೆಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪರಿಚಯ ಬೆಳೆದು, ಅದು ಪ್ರೀತಿಗೆ ತಿರುಗಿತು.
ಒಂದೂಗೂಡಿಸಿದ ಕೃಷ್ಣ ಭಕ್ತಿ: ಇಬ್ಬರೂ ಇಸ್ಕಾನ್ ಪರಂಪರೆಯ ಕೃಷ್ಣ ಭಕ್ತರಾಗಿದ್ದು, ಆಧ್ಯಾತ್ಮಿಕ ಚಿಂತನೆ, ಭಾರತೀಯ ಸಂಸ್ಕೃತಿಯ ಮೇಲಿನ ಅಭಿಮಾನ ಹಾಗೂ ಒಂದೇ ರೀತಿಯ ಜೀವನ ಮೌಲ್ಯಗಳು ಇವರನ್ನು ಮತ್ತಷ್ಟು ಹತ್ತಿರ ತಂದವು. ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಅರ್ಥ ಮಾಡಿಕೊಂಡ ಬಳಿಕ ಇದೀಗ ಸತಿ-ಪತಿಯಾಗಿದ್ದಾರೆ.
ಆಷಾಢಕ್ಕೂ ಮುನ್ನ ವಿವಾಹ: ಆಷಾಢ ಮಾಸ ಆರಂಭವಾಗುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಮದುವೆ ನೆರವೇರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಅಮೆರಿಕದಲ್ಲಿದ್ದ ಶಾನೋನ್ ಅವರ ಕುಟುಂಬದವರು ಭಾರತಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಆದರೂ ಎರಡೂ ಕುಟುಂಬಗಳ ಸಂಪೂರ್ಣ ಒಪ್ಪಿಗೆಯೊಂದಿಗೆ ಸಂಪಾಜೆಯ ದೇವಸ್ಥಾನದಲ್ಲಿ ಬಂಧು-ಬಳಗದ ಸಮ್ಮುಖದಲ್ಲಿ ವಿವಾಹ ನೆರವೇರಿತು.
ಶಾನೋನ್ ಈಗ ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದಾರೆ. ‘ಈಗಾಗಲೇ ಕನ್ನಡದ ಅಲ್ಪಸ್ವಲ್ಪ ಜ್ಞಾನವೂ ಇದೆ. ದಕ್ಷಿಣ ಕನ್ನಡದ ಸಾಂಪ್ರದಾಯಿಕ ಆಹಾರ ಹಾಗೂ ಭಾರತೀಯ ಜೀವನಶೈಲಿ ತಮ್ಮನ್ನು ಆಕರ್ಷಿಸಿದೆ’ ಎಂದು ಶಾನೋನ್ ಸಂತಸ ವ್ಯಕ್ತಪಡಿಸಿದ್ದಾರೆ.
“ಭಾರತೀಯನನ್ನು ವಿವಾಹವಾಗಿರುವುದರಲ್ಲಿ ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಿದೆ. ಭಾರತೀಯ ಸಂಸ್ಕೃತಿ, ಆಧ್ಯಾತ್ಮ ಮತ್ತು ಕುಟುಂಬ ವ್ಯವಸ್ಥೆ ನನ್ನನ್ನು ತುಂಬಾ ಸೆಳೆದಿವೆ” ಅಂತಾರೆ ವಧು ಶಾನೋನ್. “ನಮ್ಮ ವಿವಾಹಕ್ಕೆ ಎರಡೂ ಕುಟುಂಬಗಳೂ ಸಂಪೂರ್ಣ ಬೆಂಬಲ ನೀಡಿದ್ದಾರೆ. ಶಾನೋನ್ ಅವರ ಆಧ್ಯಾತ್ಮಿಕ ಒಲವು ಹಾಗೂ ಭಾರತೀಯ ಸಂಸ್ಕೃತಿಯ ಮೇಲಿನ ಗೌರವವೇ ನನ್ನನ್ನು ಹೆಚ್ಚು ಆಕರ್ಷಿಸಿತು” ಎಂದು ವರ ಸಾಯಿ ಸಂಕೇತ್ ತಿಳಿಸಿದ್ದಾರೆ.