ಬಿಹಾರ ಅಗಸ್ಟ್ 02: ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡ 5 ಅಡಿ ಉದ್ದದ ಮೊಸಳೆಯನ್ನು ರಕ್ಷಿಸಿದ ರೈತನೊಬ್ಬ, ಅದನ್ನು ಅರಣ್ಯಾಧಿಕಾರಿಗಳಿಗೆ ಒಪ್ಪಿಸಲು ಸಿಬ್ಬಂದಿ ಇಲ್ಲದಿದ್ದಾಗ ಸ್ವತಃ ತನ್ನ ಹೆಗಲ ಮೇಲೆ ಹೊತ್ತುಕೊಂಡು ಪೊಲೀಸ್ ಠಾಣೆಗೆ ತೆರಳಿದ ಅಪರೂಪದ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಸುಪೌಲ್ ಜಿಲ್ಲೆಯ ಭೀಮನಗರ ಬಳಿ ರೈತರು ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೆಳೆಗಳ ನಡುವೆ ಅಡಗಿದ್ದ 5 ಅಡಿ ಉದ್ದದ ಮೊಸಳೆ ಕಂಡು ಬೆಚ್ಚಿಬಿದ್ದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ರೈತ ಅಮಿತ್ ಕುಮಾರ್ ಹಾಗೂ ಗ್ರಾಮಸ್ಥರು, ಮೊಸಳೆಗೆ ಯಾವುದೇ ಹಾನಿ ಮಾಡದೆ, ಯಾರ ಮೇಲೆಯೂ ದಾಳಿ ನಡೆಸದಂತೆ ಅದರ ಮೂತಿಯನ್ನು ಹಗ್ಗದಿಂದ ಬಿಗಿದು ಸುರಕ್ಷಿತವಾಗಿ ಸೆರೆಹಿಡಿದರು.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ತಕ್ಷಣದ ಸಹಾಯ ಲಭಿಸದಿದ್ದಾಗ, ರೈತ ಅಮಿತ್ ಕುಮಾರ್ ಹಿಂಜರಿಯದೆ ಆ ಬೃಹತ್ ಮೊಸಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಅರಣ್ಯ ಕಚೇರಿಯತ್ತ ನಡೆದಿದ್ದಾರೆ. ಅಲ್ಲೂ ಅಧಿಕಾರಿಗಳು ಇಲ್ಲದಿದ್ದಾಗ, ದಾರಿಯುದ್ದಕ್ಕೂ ಮೊಸಳೆಯನ್ನು ಹೆಗಲ ಮೇಲೆಯೇ ಹೊತ್ತು ಭೀಮನಗರ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಹಾದಿಯುದ್ದಕ್ಕೂ ಸಾರ್ವಜನಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರಿಂದ ವೀಡಿಯೊ ಭಾರಿ ವೈರಲ್ ಆಗಿದೆ.
ಪೊಲೀಸರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ರವಿ ರಂಜನ್ ನೇತೃತ್ವದ ತಂಡ ಮೊಸಳೆಯನ್ನು ವಶಕ್ಕೆ ಪಡೆದಿದೆ. ವೈದ್ಯಕೀಯ ತಪಾಸಣೆ ನಡೆಸಿ ಮೊಸಳೆ ಆರೋಗ್ಯವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಅದನ್ನು ಸುರಕ್ಷಿತವಾಗಿ ಕೋಸಿ ನದಿಗೆ ಬಿಡಲಾಗಿದೆ. ಮಳೆಗಾಲದಲ್ಲಿ ನೀರಿನ ಮಟ್ಟ ಏರಿಕೆಯಾಗುವುದರಿಂದ ಮೊಸಳೆ ಗದ್ದೆಗಳಿಗೆ ಬರುತ್ತವೆ ಎಂದು ತಿಳಿಸಿದ ಅರಣ್ಯಾಧಿಕಾರಿಗಳು, ಗ್ರಾಮಸ್ಥರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಆದರೆ, ಸಾರ್ವಜನಿಕರು ಇಂತಹ ಸಾಹಸಕ್ಕೆ ಕೈಹಾಕದೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.