DAKSHINA KANNADA
ಭಾರತದ ಜಾತ್ಯಾತೀತತೆಗೆ ಪೆಟ್ಟು ನೀಡುತ್ತಿರುವ ಸೋಶಿಯಲ್ ಮೀಡಿಯಾ- ಮಣಿಶಂಕರ್ ಅಯ್ಯರ್

ಭಾರತದ ಜಾತ್ಯಾತೀತತೆಗೆ ಪೆಟ್ಟು ನೀಡುತ್ತಿರುವ ಸೋಶಿಯಲ್ ಮೀಡಿಯಾ- ಮಣಿಶಂಕರ್ ಅಯ್ಯರ್
ಮೂಡುಬಿದಿರೆ ನವೆಂಬರ್ 14: ದೇಶದ ಜಾತ್ಯಾತೀತತೆಯನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿ ವಿಕೃತಗೊಳಿಸುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಕಿಡಿಕಾರಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಂ ಸ್ಪೀಕರ್ ಕ್ಲಬ್ ಮಿಜಾರಿನಲ್ಲಿರುವ ಎಐಇಟಿ ಅಡಿಟೋರಿಯಂನಲ್ಲಿ ನೆಹರೂ ಚಿಂತನೆಗಳ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಜಾತಿ, ಧರ್ಮದ ತಾರಾತಮ್ಯದಲ್ಲಿ ರಾಷ್ಟ್ರೀಯತೆಯನ್ನು ಅಳೆಯುವುದು ಸಲ್ಲದು ಎನ್ನುವುದನ್ನು ಅಚಲವಾಗಿ ನಂಬಿದ್ದ ನೆಹರೂ, ಯಾವ ವ್ಯಕ್ತಿ ಇತರ ಭಾರತೀಯನನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೋ, ಆತನೆ ನಿಜವಾದ ಭಾರತೀಯ ಎಂದು ನಂಬಿದ್ದರು.
ಆದರೆ ಇಂದು ಒಂದು ಸಿದ್ದಾಂತದ ಹಿಂದೆ ಬಿದ್ದು, ಮುಸ್ಲಿಂರನ್ನು ಅನ್ಯರಂತೆ ಕಾಣುವ ಮನಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಕೋಮುವಾದಿಗಳ ಸಂಕುಚಿತ ಮನೋಭಾವನೆಯಿಂದ ನೆಹರೂ ಕಂಡಿದ್ದ ಜಾತ್ಯಾತೀತ ಭಾರತ ನಲುಗುತ್ತಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿ ಮನಸ್ಸುಗಳನ್ನು ವಿಕೃತಗೊಳಿಸುವ ಕೆಲಸಗಳು ನಡೆಯುತ್ತಿದೆ.
ನೆಹರೂ ಅವರನ್ನು ತಾರ್ಕಿಕವಾಗಿ ವಿಮರ್ಶಿಸುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ಇಂದು ಬುದ್ಧಿಹೀನರ ರೀತಿಯಲ್ಲಿ ಟೀಕಿಸಲಾಗುತ್ತಿದೆ. ಇಂತಹದೊಂದು ಬೆಳವಣಿಗೆ ಸಭ್ಯ ಸಮಾಜದ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟರು.