Connect with us

    DAKSHINA KANNADA

    ಕೇರಳದ ಕೊಲೆಗಟುಕರ ಜೊತೆ ರಮಾನಾಥ ರೈಗಳ ಸಾಮರಸ್ಯ ನಡಿಗೆ ಎಂಬ ನಾಟಕ- ನಳಿನ್ ಕುಮಾರ್ ಕಟೀಲ್ ಆರೋಪ

    ಕೇರಳದ ಕೊಲೆಗಟುಕರ ಜೊತೆ ರಮಾನಾಥ ರೈಗಳ ಸಾಮರಸ್ಯ ನಡಿಗೆ ಎಂಬ ನಾಟಕ- ನಳಿನ್ ಕುಮಾರ್ ಕಟೀಲ್ ಆರೋಪ

    ಮಂಗಳೂರು,ಡಿಸೆಂಬರ್ 12: ಸಚಿವ ರಮಾನಾಥ ರೈ ತಮ್ಮ ಸಾಮರಸ್ಯ ಯಾತ್ರೆಯಲ್ಲಿ ಕೇರಳದಲ್ಲಿ ನಡೆಯುತ್ತಿರುವ ಹತ್ಯಾಕಾಂಡದ ರೂವಾರಿಗಳಾದ ಸಿಪಿಎಂ ಪಕ್ಷವನ್ನು ಸೇರಿಸಿಕೊಳ್ಳುವ ಮೂಲಕ ದಕ್ಷಿಣಕನ್ನಡ ಜಿಲ್ಲೆಗೂ ಹತ್ಯಾ ರಾಜಕೀಯವನ್ನು ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

    ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಕೇರಳದಲ್ಲಿ ಅತೀ ಹೆಚ್ಚು ಕಾಂಗ್ರೇಸ್, ಮುಸ್ಲಿಂ ಲೀಗ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೊಂದ ಸಿಪಿಎಂ ಪಕ್ಷವನ್ನು ಸೇರಿಸಿಕೊಂಡು ರಮಾನಾಥ ರೈಗಳು ಯಾವ ರೀತಿಯ ಸಾಮರಸ್ಯವನ್ನು ಜಿಲ್ಲೆಯಲ್ಲಿ ತರಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.

    ತನ್ನ ಅಸಮರ್ಥ ಆಡಳಿತವನ್ನು ಮರೆಮಾಚಲು ಉಸ್ತುವಾರಿ ಸಚಿವರು ಇದೀಗ ಸಾಮರಸ್ಯ ಪಾದಯಾತ್ರೆ ಮೂಲಕ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಲು ಸಚಿವ ರಮಾನಾಥ ರೈಗಳೇ ಪ್ರಮುಖ ಕಾರಣ ಎಂದ ಅವರು ಜಿಲ್ಲೆಯಲ್ಲಿ ಸಾಮರಸ್ಯ ಹದಗೆಟ್ಟಿದೆ ಎನ್ನುವ ಸಚಿವರು ಕೇವಲ ಅವರ ಕ್ಷೇತ್ರವಾದ ಬಂಟ್ವಾಳದಲ್ಲಿ ಮಾತ್ರ ಪಾದಯಾತ್ರೆ ಮಾಡುತ್ತಿರುವುದು ಓಟಿನ ಮೇಲಿನ ಆಸೆಯಿಂದಲೇ ಎಂದು ಅವರು ಆರೋಪಿಸಿದರು.

    ಪಾದಯಾತ್ರ ಮಾಡುವುದಾದರೆ ಮಂಗಳೂರಿನಿಂದ ಸಂಪಾಜೆ ವರೆಗೆ ಪಾದಯಾತ್ರೆ ಮಾಡಿ ಎಂದು ಅವರು ಸಚಿವರಿಗೆ ಕಿವಿ ಮಾತು ಹೇಳಿದರು. ಈ ಪಾದಯಾತ್ರೆಗಿಂತ ತೀರ್ಥಯಾತ್ರೆ ಮಾಡಿದರೆ ಪುಣ್ಯವಾದರೂ ಸಿಗುತ್ತಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದರು.
    ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಿ ಅನುಮಾನಾಸ್ಪದ ಸಾವನ್ನು ಎನ್.ಐ.ಎ ಗೆ ವಹಿಸಬೇಕೆಂದು ಒತ್ತಾಯಿಸಿದ ಅವರು ಸಾವು ಖಂಡಿಸಿ ಡಿಸೆಂಬರ್ 18 ರಂದು ಹೊನ್ನಾವರದಲ್ಲಿ ಬಿಜೆಪಿ ನೇತೃತ್ವದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.

    ಜಿಲ್ಲೆಯಲ್ಲಿ ಮೊದಲು ಮಸೀದಿಗೆ ಕಲ್ಲು ಹೊಡೆದವರು ರಮಾನಾಥ ರೈಗಳು ಎಂದು ಕಾಂಗ್ರೇಸ್ ಪಕ್ಷದವರೇ ಹೇಳುತ್ತಿದ್ದು, ಇದರ ಬಗ್ಗೆಯೂ ಚರ್ಚೆ ನಡೆಯಬೇಕಿದೆ ಎಂದು ಅವರು ಸಚಿವರಿಗೆ ಟಾಂಗ್ ನೀಡಿದರು.

    ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ಗೆ ಹಾರ್ಲಿಕ್ಸ್ ಇದ್ದಂತೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply