ಮಂಗಳೂರು,ಅಗಸ್ಚ್ 10: ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವಿನ ಕುರಿತಂತೆ ಕೆಲವು ಸಂಘಟನೆಗಳು ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾರ ತೇಜೋವಧೆಗೆ ಮುಂದಾಗಿರುವುದನ್ನು ಖಂಡಿಸಿ ಮೋಹನ್ ಆಳ್ವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಬೃಹತ್ ಬೆಂಬಲ ಸಭೆಯನ್ನು ಆಗಸ್ಟ್ 12 ರ ಶನಿವಾರ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಕಾವ್ಯಾ ಸಾವು ಕೇವಲ ಆಕೆಯ ಪೋಷಕರಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ನೋವು ತಂದ ವಿಚಾರವಾಗಿದೆ. ಈ ಸಾವು ಅನಿರೀಕ್ಷಿತವೋ, ಅಥವಾ ಪೂರ್ವಯೋಜಿತವೋ ಎನ್ನುವ ಕಪೋಲಕಲ್ಪಿತ ವರದಿಗಳನ್ನು ಕೆಲವು ಮಾಧ್ಯಮಗಳು ಹಾಗೂ ಸಂಘಸಂಸ್ಥೆಗಳು ಮಾಡುವ ಮೂಲಕ ಮೋಹನ್ ಆಳ್ವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡಲಾಗುತ್ತಿರುವುದು ತಪ್ಪೆಂದು ಅವರು ಹೇಳಿದರು.ಘಟನೆಗೆ ಸಂಬಂಧಿಸಿದಂತೆ ಸರಕಾರದ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲು ಸಹಕರಿಸುವಂತೆ ಆಳ್ವಾರು ಈಗಾಗಲೇ ತಿಳಿಸಿರುವಾಗ ಮತ್ತೆ ಮತ್ತೆ ಆಳ್ವಾರ ವಿರುದ್ಧವಾಗಿ ಹೇಳಿಕೆ ನೀಡುವ ಮೂಲಕ ಅವರ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಈ ನಿಟ್ಟಿನಲ್ಲಿ ಆಳ್ವರಿಗೆ ಬೆಂಬಲ ನೀಡುವ ಉದ್ದೇಶದಿಂದ ಅಗಸ್ಟ್ 12 ಶನಿವಾರದಂದು ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ಆಳ್ವಾರ ಬೆಂಬಲಕ್ಕಾಗಿ ಬೃಹತ್ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲಾ ವರ್ಗದ ಜನ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.