DAKSHINA KANNADA
ಅಂಗಡಿಗೆ ನುಗ್ಗಿ, ಚಿನ್ನ, ನಗದು ದೋಚಿದ ಆರೋಪ – ಯಲಹಂಕ ಪೊಲೀಸರ ವಿರುದ್ಧ ದೂರು

ಅಂಗಡಿಗೆ ನುಗ್ಗಿ, ಚಿನ್ನ, ನಗದು ದೋಚಿದ ಆರೋಪ – ಯಲಹಂಕ ಪೊಲೀಸರ ವಿರುದ್ಧ ದೂರು
ಮಂಗಳೂರು ಅಗಸ್ಟ್ 04: ಕಳ್ಳರನ್ನು ಹಿಡಿದು ಅವರು ಕದ್ದ ಮಾಲುನ್ನು ಸಂಬಂಧಪಟ್ಟವರಿಗೆ ಒಪ್ಪಿಸುವ ಪೊಲೀಸರೇ ಚಿನ್ನದ ಅಂಗಡಿಗೆ ನುಗ್ಗಿ ಚಿನ್ನಾಭರಣ ಲೂಟಿ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕ ಠಾಣೆಯ ಪೊಲೀಸರು ಚಿನ್ನದ ಗುಣಮಟ್ಟ ಪರಿಶೀಲನೆ ಮಾಡುವ ಅಂಗಡಿಗೆ ನುಗ್ಗಿ ಸಿಬ್ಬಂದಿಗೆ ದೈಹಿಕ ಹಲ್ಲೆ ನಡೆಸಿ 180 ಗ್ರಾಂ. ಚಿನ್ನದ ಗಟ್ಟಿ ಹಾಗೂ 55,250 ಹಾಗೂ ಅಲ್ಲಿನ ಸಿಬಂದಿಯ ಮೊಬೈಲ್ ಫೋನ್ ದೋಚಿಕೊಂಡ ಘಟನೆ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿ ನಡೆದಿದೆ.
ಜುಲೈ 19ರಂದು ಸಂಜೆ ಈ ಘಟನೆ ನಡೆದಿದ್ದು, ಐದು ಗಂಟೆಯ ಸುಮಾರಿಗೆ ಇನೋವಾ ಕಾರಿನಲ್ಲಿ ಬಂದ ಆರು ಮಂದಿ ಇಲ್ಲಿಯ ಎಂ.ಟಿ.ಸಿ. ಗೋಲ್ಡ್ ಟೆಸ್ಟಿಂಗ್ ಅಂಗಡಿಗೆ ಆಗಮಿಸಿದ್ದಾರೆ. ಅಂಗಡಿಯ ಸಿಬಂದಿ ಸದಾಶಿವ ಆಚಾರ್ ಅವರಿಗೆ ತಾವು ಕರೆತಂದ ವ್ಯಕ್ತಿಯೊಬ್ಬನಿಂದ ಕರೆ ಮಾಡಿಸಿ ತನ್ನ ಚಿನ್ನದ ಆಭರಣಗಳು ಮಂಗಳೂರಿನ ಕರಾವಳಿ ಬ್ಯಾಂಕಿನಲ್ಲಿ ಗಿರವಿ ಇಟ್ಟಿದ್ದು, ಅದನ್ನು ಮಾರಾಟ ಮಾಡಬೇಕಾಗಿರುವುದರಿಂದ ತಾವು ಬಂದು ಅದರ ಗುಣಮಟ್ಟ ಪರಿಶೀಲಿಸಿ ಕೊಡಬೇಕೆಂದು ಹೇಳಿಸಿದ್ದಾರೆ. ಅವರ ಮಾತಿನಂತೆ ಸದಾಶಿವ ಆಚಾರ್ ಕರಾವಳಿ ಬ್ಯಾಂಕಿನ ಬಳಿ ಹೋದಾಗ, ಆ ಆರು ಮಂದಿ ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿನತ್ತ ತೆರಳಿದ್ದಾರೆ ಎಂದು ಹೇಳಲಾಗಿದೆ.

ಅಂಗಡಿ ಮಾಲೀಕರಿಗೆ ಕರೆಮಾಡಲು ಯತ್ನಿಸಿದಾಗ ಅವರ ಮೊಬೈಲ್, ನಗದು 55,250ರೂ. ಹಾಗೂ ಅವರ ಬಳಿಯಿದ್ದ ಇತರೆ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ಸದಾಶಿವ ಆಚಾರ್ ಹಾಗೂ ಅವರು ಕರೆತಂದ ಇನ್ನೊಬ್ಬ ವ್ಯಕ್ತಿ ಹಾಗೂ ಮಧ್ಯವರ್ತಿ ಚಂದ್ರಶೇಖರ್ ಎಂಬವನನ್ನೂ ಕಾರಿನಿಂದಿಳಿಸಿ ಫೊಟೋ ತೆಗೆಸಿ ಮಾಧ್ಯಮದವರಿಗೆ ಕರೆಮಾಡುವಂತೆ ನಟಿಸಿದ್ದಾರೆ. ಅಲ್ಲದೆ ಸದಾಶಿವ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ನೀಡಿದ್ದಾರೆ ಎಮದು ಆರೋಪಿಸಲಾಗಿದೆ. ತನಗೂ ಕರೆಮಾಡಿದಾಗ ತನ್ನ ಫೋನ್ ನೋಟ್ರೀಚೆಬಲ್ ಆಗಿದ್ದರಿಂದ ಸದಾಶಿವ ತನ್ನ ಅಣ್ಣ ಮೋಹನ್ ಅವರಿಗೆ ಕರೆಮಾಡಿದ್ದಾರೆ. ಆದರೆ, ತಾನು ಏನಿದ್ದರೂ ಅಂಗಡಿ ಬಂದರಷ್ಟೇ ಮಾತನಾಡುವುದು ಎಂದು ಮೋಹನ್ ಹೇಳಿದಾಗ ಮತ್ತೆ ಚಿನ್ನ ಪರಿಶೀಲನೆಯ ಅಂಗಡಿಗೆ ಬಂದಿದ್ದಾರೆ.
ಅಂಗಡಿಗೆ ಬಂದ ವ್ಯಕ್ತಿಗಳು, `ನಾವು ಬೆಂಗಳೂರು ಪೊಲೀಸರು. ನಿಮ್ಮ ತಮ್ಮ ಸತೀಶ್ ಕಳ್ಳತನದ ಮಾಲುಗಳನ್ನು ಮಧ್ಯವರ್ತಿ ಚಂದ್ರಶೇಖರ್ ಅವರಿಂದ ಕೊಂಡಿದ್ದಾರೆ’ ಎಂದಾಗ, ಮೋಹನ್ `ನಾವೇನಿದ್ದರೂ ಬ್ಯಾಂಕಿನ ಮೂಲಕ ವ್ಯವಹಾರ ಮಾಡುತ್ತೇವೆ ವಿನ: ವ್ಯಕ್ತಿಗಳಿಂದಲ್ಲ ಎಂದಿದ್ದಾರೆ. ಇದೀಗ ನನ್ನ ತಮ್ಮ ಊರಲ್ಲಿಲ್ಲ. ನಾಳೆ ಬನ್ನಿ ಎಂದಾಗ ಪೊಲೀಸರು ನಿಮ್ಮ ಸಿಬಂದಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ. ಅಲ್ಲಿಗೇ ಬನ್ನಿ ಎಂದಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಅಂಗಡಿಯಲ್ಲಿದ್ದ 180 ಗ್ರಾಂ.
ಚಿನ್ನದ ಗಟ್ಟಿಯನ್ನು ಬಲವಂತವಾಗಿ ತೆಗೆದುಕೊಂಡು ಸಿಬಂದಿಗಳಿಂದ ಖಾಲಿ ಬಿಳಿ ಹಾಳೆಯಲ್ಲಿ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಆದರೆ, ಮಹಜರಿನಲ್ಲಿ 140 ಗ್ರಾಂ. ಚಿನ್ನ ಆಭರಣಗಳನ್ನು ಅಮಾನತು ಪಡಿಸಿರುವಂತೆ ನಮೂದಿಸಿದ್ದಾರೆ. ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ 180 ಗ್ರಾಂ. ಚಿನ್ನ ಹಾಗೂ 55,250ರೂ.ಗಳನ್ನು ತೆಗೆದುಕೊಂಡಿರುವ ಪೊಲೀಸರ ವಿರುದ್ಧ ಕಾನೂನುಕ್ರಮಕೈಗೊಂಡು, ದೋಚಿರುವ ಸೊತ್ತುಗಳನ್ನು ವಾಪಾಸು ಕೊಡಿಸುವಂತೆ ಎಂಟಿಸಿ ಗೋಲ್ಡ್ ಟೆಸ್ಟಿಂಗ್ ಅಂಗಡಿಯ ಪಾಲುದಾರ ಸತೀಶ್ ರಾವ್ ಪೊಲೀಸ್ ಅಧಿಕಾರಿಗಳಿಗೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರ ಈ ಕೃತ್ಯದ ವಿರುದ್ಧ ಚಿನ್ನ ಪರಿಶೀಲನೆಯ ಅಂಗಡಿ ಪಾಲುದಾರ ಎ. ಸತೀಶ್ ರಾವ್ ಡಿಜಿಪಿ ಹಾಗೂ ಐಜಿಪಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.