ಪುಂಜಾಲಕಟ್ಟೆ ಜನವರಿ 01: ಮನೆಯ ಮಹಡಿಯಿಂದ ಕೆಳಕ್ಕೆ ಬಿದ್ದು ಯುವಕನೋರ್ವ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕು ಮೂಡನಡುಗೋಡು ಗ್ರಾಮದ ನಡುದಂಡೆ ಮನೆ ಎಂಬಲ್ಲಿ ಡಿಸೆಂಬರ್ 30 ರಂದು ನಡೆದಿದೆ.


ಮೃತರನ್ನು ಚಂದ್ರ ಪೂಜಾರಿ ಎಂಬವರ ಪುತ್ರ ಪ್ರವೀಣ (26) ಎಂದು ಗುರುತಿಸಲಾಗಿದೆ. ಮ್ಮ ಪ್ರವೀಣ ಪ್ರತಿ ನಿತ್ಯ ತನ್ನ ಅಣ್ಣ ಪ್ರಸಾದ್ ಜೊತೆ ರಾತ್ರಿ ಊಟದ ಬಳಿಕ ಮನೆಯ ಮಹಡಿಯ ಮೇಲೆ ಹೋಗಿ ಮಾತುಕತೆ ನಡೆಸಿ ಬರುತ್ತಿದ್ದು, ಎಂದಿನಂತೆ ಮಂಗಳವಾರ ರಾತ್ರಿ ಇಬ್ಬರೂ ಮಾತುಕತೆ ನಡೆಸಲು ಅವರ ಮನೆಯ ಮಹಡಿ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಹೋಗಿ ಮಾತು ಕತೆ ನಡೆಸಿ, ಪ್ರಸಾದ್ ಅವರು ಬರುತ್ತಿರುವಾಗ ಪ್ರವೀಣ್ ತಮ್ಮ ಮೊಬೈಲ್ ನಲ್ಲಿ ಮಾತನಾಡುತ್ತಿದ್ದರು. ಆದ್ದರಿಂದ ರಾತ್ರಿ 10 ಗಂಟೆಗೆ ತಮ್ಮ ಪ್ರವೀಣನನ್ನು ಅಲ್ಲಿಯೇ ಬಿಟ್ಟು ಬಂದಿರುತ್ತಾರೆ.

ಪ್ರಸಾದ್ ಮನೆಯೊಳಗೆ ಬಂದ ನಂತರ ಸುಮಾರು 10.10 ಗಂಟೆಗೆ ಮನೆಯ ಮೇಲಿಂದ ಏನೋ ಬಿದ್ದ ಹಾಗೆ ಜೋರಾಗಿ ಶಬ್ದ ಕೇಳಿಸಿದ್ದು,ಆಗ ಪ್ರಸಾದ್ ಮತ್ತು ಅವರ ತಾಯಿ, ತಂಗಿ ತತ್‌ಕ್ಷಣ ಮನೆಯ ಹೋರಗೆ ಹೋಗಿ ನೋಡಿದಾಗ ಪ್ರವೀಣ್ ಕೆಳಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಕರ್ತವ್ಯ ನಿರತ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪ್ರವೀಣ ಮೃತಪಟ್ಟ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ ಎಂದು ಪ್ರಸಾದ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರವೀಣ್ ಅವರು ಬಾರ್ ನಲ್ಲಿ ವೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Share Information