ಚಿಕ್ಕಮಗಳೂರು ಫೆಬ್ರವರಿ 22: ಕಾಡಾನೆ ದಾಳಿ ಮಾಡಿದ ಪರಿಣಾಮ ಮಹಿಳಾ ಕಾರ್ಮಿಕೆಯೊಬ್ಬರು ಸಾವನಪ್ಪಿದ ಘಟನೆ ಎನ್.ಆರ್.ಪುರ ತಾಲೂಕಿನ ಹುಣಸೆಹಳ್ಳಿ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಕೂಡ್ಲಿಗಿ ಮೂಲದ ಕೂಲಿ ಕಾರ್ಮಿಕೆ ಬೋರಮ್ಮ ಮೃತಪಟ್ಟವರು. ಈ ಪರಿಸರದಲ್ಲಿ ಕಳೆದ ನಾಲ್ಕು ದಿನಗಳ ಅಂತರದಲ್ಲಿ ನಡೆದ ಎರಡನೆಯ ಪ್ರಕರಣ ಇದಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಇಂದು ಕೊಪ್ಪ ಅರಣ್ಯ ವಿಭಾಗದ ಹುಣಸೆಹಳ್ಳಿ, ಪುರ ಬಳಿಯ ನಾಗೇಶಗೌಡರ ತೋಟದಲ್ಲಿ ಬೋರಮ್ಮರ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ.
ನಾಲ್ಕು ದಿನಗಳ ಹಿಂದೆ ಇದೆ ತೋಟದಲ್ಲಿ ಕಾಡಾನೆ ದಾಳಿಗೆ ಯಶೋಧ ಎಂಬವರು ಬಲಿಯಾಗಿದ್ದರು. ಅದಲ್ಲದೇ ಕಾಡಾನೆ ಓಡಿಸಲು ಕಾರ್ಯಾಚರಣೆಗೆ ಕರೆತರಲಾಗಿದ್ದ ನಾಲ್ಕು ಆನೆಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ. ಈ ಮಧ್ಯೆ ಮತ್ತೆ ಆನೆ ದಾಳಿಗೆ ಮಹಿಳೆ ಬಲಿಯಾಗಿರುವುದು ಸ್ಥಳೀಯರನ್ನು ಕೆರಳಿಸಿದೆ. ಕಾಡಾನೆ ದಾಳಿಗೆ ನಿರಂತರ ಜೀವ ಬಲಿಯಾಗುತ್ತಿದ್ದರೂ ಇದರ ತಡೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದ ವ್ಯವಸ್ಥೆ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಶಾಸಕ ರಾಜೇಗೌಡರನ್ನು ಸ್ಥಳಿಯರ ತರಾಟೆಗೈದರು.