ಮಂಗಳೂರು, ಆಗಸ್ಟ್ 10: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಖಚಿತ ಗುರುತು ಸಿಕ್ಕಿದೆ. ಅವರನ್ನು ಕೆಲವರು ಬಚ್ಚಿಟ್ಟಿದ್ದಾರೆ. ಆದಷ್ಟು ಶೀಘ್ರ ಅವರನ್ನು ಬಂಧಿಸುತ್ತೇವೆ ಎಂದು ಮಂಗಳೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಜನರನ್ನು ಬಂಧಿಸಲಾಗಿದೆ. ಹತ್ಯೆಯ ಪ್ರಮುಖ ಮೂರು ಆರೋಪಿಗಳ ಫೋಟೋ, ಮನೆ ವಿಳಾಸ ಹಾಗೂ ಮನೆಯವರ ಬಗ್ಗೆ ಖಚಿತ ಮಾಹಿತಿ ಇದೆ. ಆದರೆ ಅವರನ್ನು ಬಚ್ಚಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದವರನ್ನು ಬಂಧಿಸುತ್ತೇವೆ. ಎನ್ಐಎ ಅಧಿಕಾರಿಗಳು ಸಹ ನಮ್ಮ ಜೊತೆ ಇದ್ದಾರೆ.
ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ಕೋರ್ಟ್ ಮುಖಾಂತರ ವಾರೆಂಟ್ ಪಡೆದು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ದಾಖಲೆಗಳ ಆಧಾರದ ಮೇಲೆ ಸಾಕ್ಷಿ ಸಂಗ್ರಹಿಸಿ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಪಿಎಫ್ಐ ಜತೆ ಶಂಕಿತ ನಂಟು ಕಂಡು ಬಂದಿದೆ. ತನಿಖೆ ನಂತರ ಯಾರಿಗೆಲ್ಲಾ ಪಿಎಫ್ಐ ಜತೆ ನಂಟು ಇದೆ ಎನ್ನುವುದನ್ನು ಹೇಳಬಹುದು. ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.
ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಷನ್ 144 ಜಾರಿ ಮಾಡಲಾಗಿದೆ. ಅದರ ಕುರಿತಾಗಿಯೂ ಸಭೆ ನಡೆಸಲಿದ್ದೇವೆ. ಮುಂದೆಯೂ ಕಾನೂನು ಸುವ್ಯವಸ್ಥೆ ಉತ್ತಮ ರೀತಿಯಲ್ಲಿ ಇರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.