ವಯನಾಡ್ ಜುಲೈ 07: ಕೇರಳದ ವಯನಾಡ್ ಜಿಲ್ಲೆಯ ಕಲ್ಲಡಿಯಲ್ಲಿ ಭಾರಿ ಮಳೆಯ ನಡುವೆಯೇ ಮಹತ್ವಾಕಾಂಕ್ಷಿ ಅವಳಿ-ಸುರಂಗ ಯೋಜನೆಯ (Twin Tunnel Project) ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಮಂಗಳವಾರ ಭೀಕರ ಭೂಕುಸಿತ ಸಂಭವಿಸಿದೆ. ಸುರಂಗಕ್ಕಾಗಿ ಬೆಟ್ಟ ಅಗೆದು ಸಂಗ್ರಹಿಸಿಡಲಾಗಿದ್ದ ಬೃಹತ್ ಪ್ರಮಾಣದ ಮಣ್ಣು ಮತ್ತು ಕಾಂಕ್ರೀಟ್ ಅವಶೇಷಗಳು ಏಕಾಏಕಿ ರಸ್ತೆಗೆ ಜಾರಿಬಿದ್ದ ಪರಿಣಾಮ ಭಾರಿ ದುರಂತ ಸಂಭವಿಸಿದೆ. ಸದ್ಯ ಸ್ಥಳದಲ್ಲಿದ್ದ ಏಳು ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನು ಹಲವು ಕಾರ್ಮಿಕರು ಹಾಗೂ ವಾಹನಗಳು ಸಿಲುಕಿಕೊಂಡಿರುವ ಭೀತಿ ಎದುರಾಗಿದೆ.

ವಯನಾಡ್ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ (DEOC) ಅಧಿಕಾರಿಗಳ ಪ್ರಕಾರ, ಕಲ್ಲಡಿ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 265 ಮಿ.ಮೀ ನಷ್ಟು ಮಳೆಯಾಗಿದೆ. ಭಾನುವಾರದಿಂದಲೇ ಸುರಂಗದ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತಾದರೂ, ಮಂಗಳವಾರ ಕಾಂಕ್ರೀಟ್ ಕೆಲಸದ ಭಾಗವಾಗಿ ತಡೆಗೋಡೆ ನಿರ್ಮಿಸುತ್ತಿದ್ದ ವೇಳೆ ಗುಡ್ಡದ ಒಂದು ಭಾಗ ಆಗಿ ಕುಸಿದು ಬಿದ್ದಿದೆ. ಇಳಿಜಾರಿನಿಂದ ಭಾರಿ ಪ್ರಮಾಣದ ಕೆಸರುಮಯ ನೀರು ಮರಗಳನ್ನು ಕಿತ್ತುಕೊಂಡು ಬಂದು ತಾತ್ಕಾಲಿಕ ಕಾರ್ಮಿಕರ ಶೆಡ್ಗಳಿಗೆ ಮತ್ತು ಅಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಡಿಕ್ಕಿ ಹೊಡೆದಿದೆ.
ಸ್ಥಳೀಯರು ಹಾಗೂ ಸಹ ಕಾರ್ಮಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಅವಶೇಷಗಳ ಅಡಿಯಿಂದ ಏಳು ಜನರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ಕಿರಣ್ ಕುಮಾರ್, ದಿಲೀಪ್, ಸೂರಜ್ ಯಾದವ್, ಸಂಜಯ್ ತಪೂರ್, ರಜನೀಶ್, ಥನ್ಮೈ ಘೋಷ್ ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಇವರೆಲ್ಲರನ್ನೂ ವಯನಾಡ್ನ ವಿಮ್ಸ್ (WIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಕೃಷಿ ಹಾಗೂ ವಯನಾಡ್ ಉಸ್ತುವಾರಿ ಸಚಿವ ಟಿ. ಸಿದ್ದಿಕ್ ಅವರೊಂದಿಗೆ ತುರ್ತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕಂದಾಯ ಸಚಿವ ಎ.ಪಿ. ಅನಿಲ್ಕುಮಾರ್ ಮತ್ತು ಸಚಿವ ಸಿದ್ದಿಕ್ ಅವರು ತಕ್ಷಣವೇ ವಯನಾಡಿಗೆ ಧಾವಿಸಿದ್ದಾರೆ. “ಯೋಜನೆಯ ಅವೈಜ್ಞಾನಿಕ ನಿರ್ಮಾಣವೇ ಈ ದುರಂತಕ್ಕೆ ಕಾರಣ” ಎಂದು ಸಚಿವ ಟಿ. ಸಿದ್ದಿಕ್ ಗಂಭೀರ ಆರೋಪ ಮಾಡಿದ್ದಾರೆ.