ಬೆಂಗಳೂರು, ಡಿಸೆಂಬರ್ 03: ಯೂಟ್ಯೂಬ್‌ ಮೂಲಕ ಕಳ್ಳತನದ ತಂತ್ರಗಾರಿಕೆ ಕಲಿತು ಉದ್ಯಮಿಯೊಬ್ಬರ ಮನೆಗೆ ಕನ್ನಹಾಕಿ ಒಂದು ಕೋಟಿ ರೂ.ಗಿಂತ ಅಧಿಕ ನಗದು ಹಾಗೂ ಚಿನ್ನಾಭರಣ ದೋಚಿದ್ದ ಇಬ್ಬರು ಖದೀಮರನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಹೇರೋಹಳ್ಳಿಯ ಎಚ್‌.ಕೆ. ಶ್ರೀನಿವಾಸ ಮೂರ್ತಿ (39), ಚಿಕ್ಕಗೊಲ್ಲರಹಟ್ಟಿಯ ಬಿ.ಎನ್‌. ಅರುಣ್‌ ಕುಮಾರ್‌ (39) ಬಂಧಿತರು. ಆರೋಪಿಗಳು ನ.8ರಂದು ರಾತ್ರಿ ಹುಲಿಮಂಗಲದಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿರುವ ಸುನಿಲ್‌ ಕುಮಾರ್‌ ಅವರ ಫ್ಲ್ಯಾಟ್‌ನ ಬಾಗಿಲು ಮುರಿದು ಒಳನುಗ್ಗಿ ಹಣ ಹಾಗೂ ಚಿನ್ನಾಭರಣ ದೋಚಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 1.14 ಕೋಟಿ ರೂ. ನಗದು, 16 ಗ್ರಾಂ. ಚಿನ್ನಾಭರಣ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಶ್ರೀನಿವಾಸ ಮೂರ್ತಿ ಈ ಹಿಂದೆ ನೈಸ್‌ ರಸ್ತೆಯ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೆ ಸುನಿಲ್‌ ಕುಮಾರ್‌ ದೂರದ ಸಂಬಂಧಿಯಾಗಿದ್ದ. ಹೀಗಾಗಿ, ಸುನೀಲ್‌ ಕುಮಾರ್‌ ಅವರ ವ್ಯವಹಾರ, ಕಾರ್ಖಾನೆ ಕುರಿತು ಆರೋಪಿ ತಿಳಿದುಕೊಂಡಿದ್ದ.

ಎರಡು ತಿಂಗಳಿನಿಂದ ಹೊಂಚು

ಕಳೆದ ಎರಡು ವರ್ಷಗಳ ಹಿಂದೆ ಟೋಲ್‌ ಸಂಗ್ರಹದ ಕೆಲಸ ತೊರೆದಿದ್ದ ಶ್ರೀನಿವಾಸ ಮೂರ್ತಿ, ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರದ ಮಳಿಗೆ ಇಟ್ಟುಕೊಂಡಿದ್ದ. ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ, ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದ ಸುನಿಲ್‌ ಕುಮಾರ್‌ ಮನೆಗೆ ಕನ್ನ ಹಾಕಲು ಯೋಜನೆ ರೂಪಿಸಿ, ಸ್ನೇಹಿತ ಅರುಣ್‌ ಕುಮಾರ್‌ ಜತೆಗೂಡಿ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದರು.

ಆರೋಪಿಗಳು ಸುನಿಲ್‌ ಕುಮಾರ್‌ ಅವರ ಮನೆಗೆ ಕನ್ನ ಹಾಕಲು ಎರಡು ತಿಂಗಳಿನಿಂದ ಹೊಂಚು ಹಾಕಿದ್ದರು. ಎರಡು ಬಾರಿ ಯತ್ನಿಸಿ ವಿಫಲರಾಗಿದ್ದರು. ನ.8ರಂದು ಸುನೀಲ್‌ ಕುಮಾರ್‌ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕುಟುಂಬ ಸಮೇತ ಕೋಲಾರಕ್ಕೆ ತೆರಳಿದ್ದರು. ಈ ಮಾಹಿತಿ ತಿಳಿದುಕೊಂಡ ಶ್ರೀನಿವಾಸಮೂರ್ತಿ, ಅರುಣ್‌ ಕುಮಾರ್‌ ಜತೆಗೂಡಿ ಅದೇ ದಿನ ರಾತ್ರಿ ಫ್ಲ್ಯಾಟ್‌ಗೆ ನುಗ್ಗಿ ಕಳವು ಮಾಡಿದ್ದರು.

ಆರೋಪಿಗಳಿಬ್ಬರೂ ಕಳ್ಳತನದ ಸುಳಿವು ಸಿಗಬಾರದೆಂದು ಮೊಬೈಲ್‌ ತೆಗೆದುಕೊಂಡು ಹೋಗಿರಲಿಲ್ಲ. ತಲೆಗೆ ಹೆಲ್ಮೆಟ್‌, ಮುಖಕ್ಕೆ ಮಾಸ್ಕ್‌ ಧರಿಸಿ ಅಪಾರ್ಟ್‌ಮೆಂಟ್‌ನ ಹಿಂಬದಿಯ ಕಾಂಪೌಂಡ್‌ ಹಾರಿ ಒಳಪ್ರವೇಶಿಸಿದ್ದ ಶ್ರೀನಿವಾಸ ಮೂರ್ತಿ, ಫ್ಲ್ಯಾಟ್‌ನ ಬಾಗಿಲು ಮುರಿದು ಒಳ ಪ್ರವೇಶಿಸಿ, 1.35 ಕೋಟಿ ರೂ. ನಗದು ಹಾಗೂ ಎರಡು ಉಂಗುರ ದೋಚಿದ್ದ. ಬಳಿಕ ಅನತಿ ದೂರದಲ್ಲಿಯೇ ಕಾದು ನಿಂತಿದ್ದ ಅರುಣ್‌ ಕುಮಾರ್‌ನೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಸಿಸಿಟಿವಿಯಿಂದ ಕಳ್ಳರ ಸುಳಿವು

ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದ ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ, ಇನ್ಸ್‌ಪೆಕ್ಟರ್‌ ಜಿ. ಸೋಮಶೇಖರ್‌ ನೇತೃತ್ವದ ತಂಡವು ಹಲವು ಆಯಾಮಗಳಲ್ಲಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳು ಕಳ್ಳತನಕ್ಕೆ ಬಂದಿದ್ದ ಕಾರಿನ ಜಾಡು ಹಿಡಿದು ಸುಮಾರು 90ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಲ್ಲಿನ ದೃಶ್ಯಾವಳಿಗಳನ್ನು ಶೋಧಿಸಿ ಕಾರಿನ ಮಾಲೀಕ ಅರುಣ್‌ ಕುಮಾರ್‌ನನ್ನು ಪತ್ತೆ ಮಾಡಿದ್ದರು. ಬಳಿಕ ಆರೋಪಿಗಳಿಬ್ಬರನ್ನೂ ಬಂಧಿಸಿ ನಗದು ಹಾಗೂ ಕಾರನ್ನು ಜಪ್ತಿ ಮಾಡಿದರು. ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ಮಾಸ್ಕ್‌ ಹಾಗೂ ಹೆಲ್ಮೆಟ್‌ ಧರಿಸುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ನೋಡಿ ಅದೇ ತಂತ್ರವನ್ನು ಅನುಸರಿಸಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿ ಶ್ರೀನಿವಾಸಮೂರ್ತಿ ಕದ್ದ ಹಣದಲ್ಲಿಯೇ ತನ್ನ ಗೆಳತಿಯ ಅಕೌಂಟ್‌ಗೆ 7 ಲಕ್ಷ ರೂ. ವರ್ಗಾಯಿಸಿದ್ದ. 97 ಲಕ್ಷ ರೂ.ಗಳನ್ನು ಅರುಣ್‌ ಕುಮಾರ್‌ ಮನೆಯಲ್ಲಿ ಇಟ್ಟಿದ್ದ. ಸ್ವಲ್ಪ ಮೊತ್ತವನ್ನು ಖರ್ಚು ಮಾಡಿಕೊಂಡಿದ್ದ.

Share Information