BANTWAL
ಗಾರೆ ಕೆಲಸಕ್ಕೆ ಬಂದವನ ಜೊತೆ ಚಕ್ಕಂದ…ಪ್ರಿಯಕರ ಜೊತೆ ಸೇರಿ ಗಂಡನನ್ನೆ ಮುಗಿಸಿದಳು..!!
ವಿಟ್ಲ ಫೆಬ್ರವರಿ 27 : ವಿಟ್ಲದಲ್ಲಿ ಇತ್ತೀಚೆಗೆ ನಡೆದ ಅಸಹಜ ಸಾವಿನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪತ್ನಿಯೇ ತನ್ನ ಗಂಡನನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ವಿಟ್ಲ ಸಮೀಪದ ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಮೃತ ವ್ಯಕ್ತಿ. ಈತನ ಪತ್ನಿ ಆಶಾ ಮತ್ತು ಪ್ರಿಯಕರ ಯೊಗೀಶ್ ಗೌಡ ಸೇರಿ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರವಿಂದ ಭಾಸ್ಕರ ಅವರು ಸುಮಾರು 2 ವರ್ಷಗಳಿಂದ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್ ಕೆಲಸವನ್ನು ಯೋಗೀಶ ಗೌಡ ನಿರ್ವಹಿಸುತ್ತಿದ್ದ. ಈ ವೇಳೆ ಆತ ಅರವಿಂದ ಭಾಸ್ಕರನ ಪತ್ನಿ ಆಶಾಳೊಂದಿಗೆ ಅನ್ಯೋನ್ಯವಾಗಿದ್ದ ಎಂದು ತಿಳಿದುಬಂದಿದೆ. ಅರವಿಂದ ಭಾಸ್ಕರ ಅವರು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೆ ಇವರ ಅಕ್ರಮ ಸಂಬಂಧದ ಬಗ್ಗೆಯೂ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ.
ಈ ನಡುವೆ ಫೆಬ್ರವರಿ 26ರಂದು ಆಶಾ ಸಂಬಂಧಿಕರಿಗೆ ಫೋನ್ ಕರೆ ಮಾಡಿದ ಪತಿ ನಿನ್ನೆ ರಾತ್ರಿ 10ಗಂಟೆಗೆ ಮನೆಯ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 7.30ರ ಸುಮಾರಿಗೆ ನೋಡುವಾಗ ಮಲಗಿದ್ದಲ್ಲಿಂದ ಏಳುತ್ತಿಲ್ಲ ಎಂದಿದ್ದಾಳೆ. ಬಳಿಕ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ವೈದ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ವೇಳೆ ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಆಶಾ ಮತ್ತು ಯೊಗೀಶ್ ಅವರನ್ನು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
You must be logged in to post a comment Login