ಚಂಡೀಗಢ, ಏಪ್ರಿಲ್ 09: ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯಲು ಯುವ ವೈದ್ಯೆಯೊಬ್ಬರು ಭಾರಿ ಸಾಹಸಕ್ಕೆ ಕೈಹಾಕಿದ್ದಾರೆ. ಖಾಸಗಿ ಆಸ್ಪತ್ರೆಯೊಂದರ ಕರಾಳ ದಂಧೆಯನ್ನು ಕಂಡು ಬೆಚ್ಚಿಬಿದ್ದ ಅವರು, ಲಕ್ಷಾಂತರ ರೂಪಾಯಿ ಸಂಬಳದ ಆಮಿಷವನ್ನು ಧಿಕ್ಕರಿಸಿ ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ ನೀಡುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದಾರೆ.

ಚಂಡೀಗಢದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ಇತ್ತೀಚೆಗಷ್ಟೇ ವೈದ್ಯೆಯಾಗಿ ನೇಮಕಗೊಂಡಿದ್ದ ಡಾ. ಪ್ರಭ್ಲೀನ್ ಕೌರ್ ಅವರು, ಅಲ್ಲಿನ ಆಡಳಿತ ಮಂಡಳಿಯು ರೋಗಿಗಳನ್ನು ಮನುಷ್ಯರಂತೆ ನೋಡುವ ಬದಲು ‘ಹಣ ಮಾಡುವ ಯಂತ್ರ’ಗಳಂತೆ ಪರಿಗಣಿಸುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ವೈದ್ಯಕೀಯ ನೈತಿಕತೆಗೆ ಎಳ್ಳುನೀರು ಬಿಡುತ್ತಿದ್ದ ಆಸ್ಪತ್ರೆಯ ಧೋರಣೆಯನ್ನು ಸಹಿಸದ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಡಾ. ಪ್ರಭ್ಲೀನ್, ಆಸ್ಪತ್ರೆಯ ಒಳಗೆ ನಡೆಯುವ ‘ಕಲೆಕ್ಷನ್ ಮಾಫಿಯಾ’ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ. “ಸಾಮಾನ್ಯ ವಾರ್ಡ್ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಬಲ್ಲ ರೋಗಿಗಳನ್ನು ಹೆಚ್ಚಿನ ಹಣ ವಸೂಲಿ ಮಾಡುವ ಉದ್ದೇಶದಿಂದ ಬಲವಂತವಾಗಿ ಐಸಿಯು (ICU) ಗೆ ದಾಖಲಿಸಲಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿಗಿಂತ ಹೆಚ್ಚಾಗಿ ಆಸ್ಪತ್ರೆಯ ಬೆಡ್ಗಳು ಭರ್ತಿಯಾಗಬೇಕು ಮತ್ತು ಬಿಲ್ ಮೊತ್ತ ಹೆಚ್ಚಾಗಬೇಕು ಎಂಬುದಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ರೋಗಿಗಳಿಗೆ ಅಗತ್ಯವಿಲ್ಲದಿದ್ದರೂ ಸಾವಿರಾರು ರೂಪಾಯಿ ಮೊತ್ತದ ಲ್ಯಾಬ್ ಪರೀಕ್ಷೆಗಳು ಮತ್ತು ಅನಗತ್ಯ ಸ್ಕ್ಯಾನಿಂಗ್ಗಳನ್ನು ಮಾಡಿಸಲಾಗುತ್ತಿದೆ,” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ದಂಧೆಯು ಕೇವಲ ಆಡಳಿತ ಮಂಡಳಿಗೆ ಸೀಮಿತವಾಗಿಲ್ಲ, ಬದಲಿಗೆ ಆಸ್ಪತ್ರೆಯ ಹಿರಿಯ ವೈದ್ಯರೇ ಇದರ ನೇತೃತ್ವ ವಹಿಸಿದ್ದಾರೆ ಎಂಬುದು ವರದಿಯ ಆತಂಕಕಾರಿ ಅಂಶ. ಆಸ್ಪತ್ರೆಯ ಆದಾಯವನ್ನು ಹೆಚ್ಚಿಸಲು ಕಿರಿಯ ವೈದ್ಯರ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿತ್ತು. ವಿಡಿಯೋದಲ್ಲಿ ಭಾವುಕರಾಗಿ ಮಾತನಾಡಿದ ಅವರು, “ನನಗೆ ದೊಡ್ಡ ಸಂಬಳ ಅಥವಾ ಪ್ರತಿಷ್ಠಿತ ಹುದ್ದೆಗಿಂತ ರೋಗಿಗಳ ಪ್ರಾಣ ಮತ್ತು ನನ್ನ ವೃತ್ತಿಯ ನೈತಿಕತೆಯೇ ಮುಖ್ಯ. ರೋಗಿಗಳನ್ನು ಲೂಟಿ ಮಾಡುವ ಇಂತಹ ವ್ಯವಸ್ಥೆಯಲ್ಲಿ ಭಾಗಿಯಾಗಿ ನಾನು ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ” ಎಂದು ಕಣ್ಣೀರಿಟ್ಟಿದ್ದಾರೆ.
ವೈದ್ಯೆಯ ಈ ಧೈರ್ಯದ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿದ್ದು, ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಲಕ್ಷಾಂತರ ಜನರು ಡಾ. ಪ್ರಭ್ಲೀನ್ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದ್ದು, ಇಂತಹ ದಂಧೆ ನಡೆಸುವ ಆಸ್ಪತ್ರೆಗಳ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.