ನೆಲಮಂಗಲ, ಏಪ್ರಿಲ್ 09: ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮ ಇದೀಗ ನೇರವಾಗಿ ಜನಸಾಮಾನ್ಯರ ಬದುಕಿನ ಮೇಲೆ ತಟ್ಟತೊಡಗಿದೆ. ಯುದ್ಧದ ಹಿನ್ನೆಲೆಯಲ್ಲಿ ಎಲ್ಪಿಜಿ (Auto LPG) ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಆಟೋ ಗ್ಯಾಸ್ ಸಿಗದೆ ಸಂಕಷ್ಟದಲ್ಲಿರುವ ಆಟೋ ಚಾಲಕರ ಕಣ್ಣೀರು ಒರೆಸಲು ನಟ ವಿನೋದ್ ರಾಜ್ ಮುಂದಾಗಿದ್ದಾರೆ.

ಗುರುವಾರ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತಮ್ಮ ತಾಯಿ, ದಿವಂಗತ ಹಿರಿಯ ನಟಿ ಡಾ. ಲೀಲಾವತಿ ಅವರ ಸಮಾಧಿಯ ಬಳಿ ನೂರಾರು ಆಟೋ ಚಾಲಕರಿಗೆ ದಿನಸಿ ಕಿಟ್ಗಳನ್ನು ವಿತರಿಸುವ ಮೂಲಕ ವಿನೋದ್ ರಾಜ್ ಅವರು ಮಾನವೀಯತೆ ಮೆರೆದಿದ್ದಾರೆ. ಕೇವಲ ಕಿಟ್ ವಿತರಣೆಯಷ್ಟೇ ಅಲ್ಲದೆ, ಬಂದಿದ್ದ ಚಾಲಕರಿಗೆ ಪ್ರೀತಿಯಿಂದ ಊಟ ಬಡಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆಟೋ ಎಲ್ಪಿಜಿ ಅಭಾವ ತೀವ್ರಗೊಂಡಿದೆ. ಇರಾನ್ ಯುದ್ಧದ ಎಫೆಕ್ಟ್ನಿಂದಾಗಿ ಪೂರೈಕೆ ಸ್ಥಗಿತಗೊಂಡಿದ್ದು, ಗ್ಯಾಸ್ ದರದಲ್ಲಿ ಭಾರಿ ಏರಿಕೆಯಾಗಿದೆ. ಗಂಟೆಗಟ್ಟಲೆ ಬಂಕ್ಗಳ ಮುಂದೆ ಸರತಿ ಸಾಲಿನಲ್ಲಿ ನಿಂತರೂ ಗ್ಯಾಸ್ ಸಿಗದೆ ಆಟೋ ಚಾಲಕರು ಬಾಡಿಗೆ ಇಲ್ಲದೆ ಪರದಾಡುತ್ತಿದ್ದಾರೆ. ಜೀವನೋಪಾಯಕ್ಕೆ ಮಾರ್ಗವಿಲ್ಲದೆ, ದಿನನಿತ್ಯದ ಖರ್ಚು ಹಾಗೂ ಸಾಲದ ಕಂತು ಕಟ್ಟಲಾಗದೆ ಕಂಗಾಲಾಗಿರುವ ಚಾಲಕರಿಗೆ ವಿನೋದ್ ರಾಜ್ ಅವರ ಈ ಸೇವೆ ದೊಡ್ಡ ಆಸರೆಯಾಗಿದೆ.
ವಿನೋದ್ ರಾಜ್ ಅವರು ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗದೆ, ಸದ್ದಿಲ್ಲದೆ ಮಾಡುತ್ತಿರುವ ಇಂತಹ ಸಮಾಜಮುಖಿ ಕೆಲಸಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಸಂದರ್ಭದಲ್ಲಿ ಕಿಟ್ ಪಡೆದ ಆಟೋ ಚಾಲಕರು ನಟನ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರಸ್ತುತ ಎಲ್ಪಿಜಿ ಕೊರತೆಯಿಂದಾಗಿ ರಾಜ್ಯದಲ್ಲಿ ಆಟೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ಬಿಕ್ಕಟ್ಟನ್ನು ಬಗೆಹರಿಸಬೇಕೆಂದು ಚಾಲಕರ ಸಂಘಟನೆಗಳು ಆಗ್ರಹಿಸಿವೆ.