ಉತ್ತರ ಪ್ರದೇಶ,ಮಾರ್ಚ್ 31: ವಿಚ್ಛೇದನ ಎನ್ನುವುದು ಸಾಮಾನ್ಯ ದೃಷ್ಟಿಯಲ್ಲಿ ನೋವಿನ ಸಂಗತಿ. ಆದರೆ, ಇಲ್ಲೊಬ್ಬ ಯುವಕನಿಗೆ ಅದು ದೀರ್ಘಕಾಲದ ಮಾನಸಿಕ ಹಿಂಸೆಯಿಂದ ಸಿಕ್ಕ ದೊಡ್ಡ ಬಿಡುಗಡೆಯಂತೆ ಕಂಡಿದೆ. ತನಗೆ ನ್ಯಾಯಾಲಯದಿಂದ ವಿಚ್ಛೇದನ ದೊರೆತ ಖುಷಿಯಲ್ಲಿ, ಆ ಯುವಕ ಬರೋಬ್ಬರಿ 9 ಕಿಲೋಮೀಟರ್ಗಳಷ್ಟು ದೂರ ದೀಡ ನಮಸ್ಕಾರ ಹಾಕುವ ಮೂಲಕ ದೇವರಿಗೆ ತನ್ನ ಹರಕೆ ತೀರಿಸಿದ್ದಾನೆ.

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ ನಿವಾಸಿ ಜೋಗೇಶ್ (25) ಎಂಬುವವರೇ ಈ ವಿಶಿಷ್ಟ ಕಾರ್ಯ ಮಾಡಿದ ಯುವಕ. ಜೋಗೇಶ್ ಅವರಿಗೆ 2022ರಲ್ಲಿ ವಿವಾಹವಾಗಿತ್ತು. ಆದರೆ, ದಾಂಪತ್ಯ ಆರಂಭವಾದ ಮೊದಲ ದಿನದಿಂದಲೇ ದಂಪತಿಗಳ ನಡುವೆ ತೀವ್ರ ಮನಸ್ತಾಪ ಉಂಟಾಗಿತ್ತು. ಕೌಟುಂಬಿಕ ಕಲಹವು ಮಿತಿಮೀರಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು.
ವೈವಾಹಿಕ ಜೀವನದ ಸಂಕೋಲೆಯಿಂದ ತನಗೆ ಮುಕ್ತಿ ಸಿಕ್ಕರೆ ದೇವಸ್ಥಾನಕ್ಕೆ ದೀಡ ನಮಸ್ಕಾರ ಹಾಕುತ್ತಾ ಬರುವುದಾಗಿ ಜೋಗೇಶ್ ಈ ಹಿಂದೆ ಹರಕೆ ಹೊತ್ತಿದ್ದರು. ಇತ್ತೀಚೆಗೆ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿ ಆದೇಶ ನೀಡಿದ ಬೆನ್ನಲ್ಲೇ, ಜೋಗೇಶ್ ತಮ್ಮ ಗ್ರಾಮದಿಂದ ದೇವಸ್ಥಾನದವರೆಗೆ ಸುಮಾರು 9 ಕಿ.ಮೀ ದೂರ ರಸ್ತೆಯಲ್ಲೇ ಮಲಗಿ ಎದ್ದು ನಮಸ್ಕರಿಸುತ್ತಾ (ದೀಡ ನಮಸ್ಕಾರ) ಸಾಗಿದ್ದಾರೆ.
ಯುವಕನ ಈ ಹರಕೆಯ ದೃಶ್ಯಗಳನ್ನು ದಾರಿಹೋಕರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. “ಮದುವೆಯ ನಂತರದ ಕಿರುಕುಳದಿಂದ ಬೇಸತ್ತವರಿಗೆ ಈ ರೀತಿಯ ಬಿಡುಗಡೆ ಎಷ್ಟು ನೆಮ್ಮದಿ ನೀಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.