ಟೆಹ್ರಾನ್, ಏಪ್ರಿಲ್ 02: ಜಾಗತಿಕ ತೈಲ ಸಾಗಣೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ತೀವ್ರ ಬಿಕ್ಕಟ್ಟಿನ ನಡುವೆಯೂ ಭಾರತದ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಇರಾನ್ ಸರ್ಕಾರ ಅಧಿಕೃತ ಭರವಸೆ ನೀಡಿದೆ. “ನಮ್ಮ ಭಾರತೀಯ ಸ್ನೇಹಿತರು ಯಾವುದೇ ಕಾರಣಕ್ಕೂ ಚಿಂತಿಸಬೇಕಿಲ್ಲ; ಭಾರತದ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ” ಎಂದು ಇರಾನ್ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ವಿಶ್ವಸಂಸ್ಥೆಯ ಮಧ್ಯಸ್ಥಿಕೆ ಮತ್ತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಯಶಸ್ವಿ ರಾಜತಾಂತ್ರಿಕ ಮಾತುಕತೆಗಳ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಇರಾನ್ ತನ್ನ ಶತ್ರು ರಾಷ್ಟ್ರಗಳ ಮೇಲೆ ಕಠಿಣ ನಿರ್ಬಂಧ ಹೇರಿದ್ದರೂ, ಭಾರತ, ಚೀನಾ ಮತ್ತು ರಷ್ಯಾದಂತಹ ‘ಸ್ನೇಹಿ ರಾಷ್ಟ್ರಗಳಿಗೆ’ ವಿಶೇಷ ವಿನಾಯಿತಿ ನೀಡಿದೆ. ಮಾರ್ಚ್ 15 ರಿಂದ ಜಾರಿಗೆ ಬಂದಿದ್ದ ಭಾಗಶಃ ದಿಗ್ಬಂಧನದ ನಡುವೆಯೂ, ಭಾರತದ ಇಂಧನ ಟ್ಯಾಂಕರ್ಗಳು ಸುಗಮವಾಗಿ ಸಂಚರಿಸಲು ಹಸಿರು ನಿಶಾನೆ ತೋರಿಸಲಾಗಿದೆ.
ಹಾರ್ಮುಜ್ ಜಲಸಂಧಿ ಪ್ರವೇಶಿಸುವ ಪ್ರತಿ ಹಡಗಿನ ಮೇಲೆ 2 ಮಿಲಿಯನ್ ಡಾಲರ್ (ಅಂದಾಜು ₹18.8 ಕೋಟಿ) ಟೋಲ್ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿಗಳನ್ನು ಇರಾನ್ ರಾಯಭಾರ ಕಚೇರಿ ಇಂದು ಸಂಪೂರ್ಣವಾಗಿ ಅಲ್ಲಗಳೆದಿದೆ. “ಮಿತ್ರ ರಾಷ್ಟ್ರಗಳ ಮೇಲೆ ಯಾವುದೇ ಆರ್ಥಿಕ ಹೊರೆ ಹೇರುವ ಉದ್ದೇಶ ನಮಗಿಲ್ಲ. ಸುರಕ್ಷತೆ ಮತ್ತು ಸಹಕಾರವೇ ನಮ್ಮ ಮೊದಲ ಆದ್ಯತೆ” ಎಂದು ತಹ್ರಾನ್ ಮೂಲಗಳು ತಿಳಿಸಿವೆ.
ಭಾರತವು ತನ್ನ ಅಗತ್ಯದ ಶೇಕಡಾ 80ಕ್ಕೂ ಅಧಿಕ ಕಚ್ಚಾ ತೈಲವನ್ನು ಇದೇ ಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ. ಒಂದು ವೇಳೆ ಇಲ್ಲಿ ಸಂಚಾರ ಸ್ಥಗಿತಗೊಂಡಿದ್ದರೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವ ಭೀತಿ ಇತ್ತು. ಆದರೆ ಇರಾನ್ನ ಈ ಭರವಸೆಯಿಂದಾಗಿ ದೇಶದ ಇಂಧನ ಭದ್ರತೆ ಸುಸ್ಥಿತಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.
ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದ ಎರಡು ಪ್ರಮುಖ ಸರಕು ಹಡಗುಗಳು ಇರಾನ್ ನೌಕಾಪಡೆಯ ರಕ್ಷಣಾ ಕವಚದ ಅಡಿಯಲ್ಲಿ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಇರಾನ್ ಮತ್ತು ಒಮಾನ್ ರಾಷ್ಟ್ರಗಳು ಮಾತ್ರ ಈ ಜಲಸಂಧಿಯ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಇರಾನ್ ಪುನರುಚ್ಚರಿಸಿದೆ.