LATEST NEWS
ಆರು ವರ್ಷದ ಪ್ರೀತಿ…ಮದುವೆ ಮಾತುಕತೆಗೆ ಬಂದಾಗ ಕೈಕೊಟ್ಟ ಪ್ರಿಯಕರ; ನೇಣಿಗೆ ಶರಣಾದ ಎಂಬಿಎ ಪದವೀಧರೆ
ಉಡುಪಿ: ಆರು ವರ್ಷ ಪ್ರೀತಿಸಿ ಕೊನೆಗೆ ಮದುವೆ ಮಾತುಕತೆ ಶುರವಾಗುತ್ತಿದ್ದಂತೆ ಎದ್ದ ಬಿರುಗಾಳಿಗೆ ಎಂಬಿಎ ಪದವೀಧರೆ ಪ್ರಾಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಪ್ರಾಣ ಕಳೆದುಕೊಂಡ ಯುವತಿ ಅನಿಶಾ ಎಂದು ಗುರುತಿಸಲಾಗಿದ್ದು, ತನ್ನ ಪ್ರಿಯಕರ ಚೇತನ್ ಮೇಲೆ ಆರೋಪ ಹೊರಿಸಿ ನಾಲ್ಕು ಪುಟ ಡೆತ್ ನೋಟ್ ಬರೆದಿದ್ದಾಳೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಸಾಯ್ಬರಕಟ್ಟೆ ಸಮೀಪದ ಕಾಜ್ರಳ್ಳಿ ನಿವಾಸಿ. ಅನಿಶಾ ಜಿ. ಪೂಜಾರಿ ಪ್ರೇಮ ಪಾಶಕ್ಕೆ ಸಿಲುಕಿದ ನತದೃಷ್ಠೆ.
ಮಧ್ಯಮ ವರ್ಗದ ಕುಟುಂಬದ ಅನಿಶಾ ಎಂಬಿಎ ಓದಿ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರು ಖಾಸಗಿ ಕಂಪನಿ ಉದ್ಯೋಗದಲ್ಲಿ ಇದ್ದಾಗ ಈಕೆಯ ಸಾಧನೆಗಳಿಗೆ ಮನೆಯಲ್ಲಿರುವ ಮೆಡಲ್ ಗಳೇ ಸಾಕ್ಷಿ. ವಯೋ ಸಹಜ ಪ್ರೀತಿ ಒಂದೇ ಊರಿನ ಇಬ್ಬರಲ್ಲಿ ಮೊಳಕೆಯೊಡೆದಿತ್ತು. ಇಬ್ಬರೂ ಊರೂರು ಸುತ್ತಿ ಪ್ರೀತಿ ಕಡಲಲ್ಲಿ ತೇಲಿದ್ದಾರೆ. ಆದ್ರೆ ಅನಿಶಾ ಪೂಜಾರಿ ಪರಿಪರಿಯಾಗಿ ಬೇಡಿದರೂ ಚೇತನ್ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ ಆತ ಕಡೆಗಣಿಸಿದ್ದಾನೆ.
ಚೇತನ್ ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದಾನೆ ಎಂದು ತಿಳಿದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಚೇತನ್ ಗೆ ಸಂಬಂಧಪಟ್ಟ ಹಾಡಿಯಲ್ಲಿ ಅನಿಶಾ ನೇಣಿಗೆ ಶರಣಾಗಿದ್ದಾಳೆ. ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ರವಾನಿಸಿದ್ದಾಳೆ. ತನ್ನ ಫೇಸ್ ಬುಕ್ ನಲ್ಲಿ ಚೇತನ್ ಒಬ್ಬ ಗರ್ಲ್ಸ್ ಹುಚ್ಚ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಾಳೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಶಾ ಪೂಜಾರಿ ಸಾವಿನ ನಂತರ ಚೇತನ್ ತಲೆಮರೆಸಿಕೊಂಡಿದ್ದಾನೆ.
ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದು, ಬಿಲ್ಲವ ಸಂಘಟನೆ ಮಧ್ಯಪ್ರವೇಶದ ನಂತರ ಎಫ್ಐಆರ್ ದಾಖಲು ಮಾಡಿದ್ದಾರೆ.
ಎಂಬಿಎ ಉತ್ತೀರ್ಣಳಾಗಿರುವ ಅನಿಶಾ ಪೂಜಾರಿ ಪ್ರೀತಿ ವಿಚಾರದಲ್ಲಿ ಸೋತಿದ್ದಾಳೆ. ಪ್ರಾಣ ಅರ್ಪಣೆ ಮಾಡಿದ್ದಾಳೆ. ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಚೇತನ್ ಶೆಟ್ಟಿಗೆ ಶಿಕ್ಷೆಯಾಗಬೇಕು ಎಂದು ಆಕೆಯ ಕುಟುಂಬ ಕಣ್ಣೀರಿಡುತ್ತಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
You must be logged in to post a comment Login