ಉಡುಪಿ ಎಪ್ರಿಲ್ 18: ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯ ಅಲ್ಮಾರ್ ಕೀ ಮೇಕರ್ ಮೂಲಕ ಒಡಿಸಿ, ಬ್ಯಾಂಕ್ ಲಾಕರ್ನಲ್ಲಿದ್ದ ಸುಮಾರು 23.67 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಉಚ್ಚಿಲದ ಕಿರಣ್ ಕುಮಾರ್ (42) ದೂರು ನೀಡಿದವರು.

ಕಿರಣ್ ಕುಮಾರ್ ಅವರು ಪಡುಬಿದ್ರಿಯ SEZ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 2016ರಲ್ಲಿ ವನಿತಾ ಎಂಬುವವರನ್ನು ಮದುವೆಯಾಗಿದ್ದರು. ದಂಪತಿ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಪ್ರಸ್ತುತ ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಕಿರಣ್ ಅವರು ತಮ್ಮ ದಾಖಲೆಗಳು ಹಾಗೂ ಐಡಿಬಿಐ (IDBI) ಬ್ಯಾಂಕ್ ಲಾಕರ್ ಕೀಯನ್ನು ಅಲ್ಮಾರಿನಲ್ಲಿ ಇಟ್ಟಿದ್ದರು.
ಏಪ್ರಿಲ್ 10ರಂದು ಕಿರಣ್ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಪತ್ನಿ ವನಿತಾ ಅವರು ಕೀ ಮೇಕರ್ ಒಬ್ಬರನ್ನು ಕರೆಸಿ ಅಲ್ಮಾರ್ ಒಡೆದಿದ್ದಾರೆ. ಅದರೊಳಗಿದ್ದ ಲಾಕರ್ ಕೀ ಬಳಸಿ ಉಡುಪಿಯ ಐಡಿಬಿಐ ಬ್ಯಾಂಕ್ ಶಾಖೆಗೆ ತೆರಳಿ, ಲಾಕರ್ನಲ್ಲಿದ್ದ 169 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ಕಳುವಾದ ಚಿನ್ನದ ಅಂದಾಜು ಮೌಲ್ಯ ₹23,67,690 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.