ಉಡುಪಿ ಮಾರ್ಚ್ 28: ಮೀನು ಲೋಡಿಂಗ್ ಕೆಲಸ ಮಾಡುವ ಸಾಮಾನ್ಯ ಕಾರ್ಮಿಕರೊಬ್ಬರನ್ನು ಉದ್ಯಮದ ಆಮಿಷವೊಡ್ಡಿ ನಂಬಿಸಿ, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಗಂಭೀರ ಪ್ರಕರಣ ಉಡುಪಿಯ ಸೆನ್ (CEN) ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಿಜಯನಗರ ಜಿಲ್ಲೆಯ ಮೂಲದ ರಾಜಾನಾಯ್ಕ (32) ಎಂಬುವವರು ಮಲ್ಪೆಯಲ್ಲಿ ಮೀನು ಲೋಡಿಂಗ್ ಕೆಲಸ ಮಾಡುತ್ತಿದ್ದರು. ಇವರೊಂದಿಗೆ ಕೆಲಸಕ್ಕಿದ್ದ ಸೂರಜ್ ಸಾಲ್ಯಾನ್ ಎಂಬಾತ, ರಾಜಾನಾಯ್ಕ ಅವರಿಗೆ ವ್ಯವಹಾರದ ಆಮಿಷವೊಡ್ಡಿ ‘SR Fisheries’ ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದಾನೆ. ಮಣಿಪಾಲದ ವಿಳಾಸ ನೀಡಿ ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ ಹಾಗೂ ಆದಿಉಡುಪಿಯ ಕರ್ನಾಟಕ ಬ್ಯಾಂಕ್ನಲ್ಲಿ ರಾಜಾನಾಯ್ಕ ಅವರ ಹೆಸರಿನಲ್ಲೇ ಖಾತೆಗಳನ್ನು ತೆರೆಸಿದ್ದಾನೆ.
ಬ್ಯಾಂಕ್ ಖಾತೆಗೆ ಸಂಬಂಧಿಸಿದ ಪಾಸ್ ಪುಸ್ತಕ, ಎಟಿಎಂ ಕಾರ್ಡ್ ಮತ್ತು ಚೆಕ್ ಬುಕ್ಗಳನ್ನು ಸೂರಜ್ ಸಾಲ್ಯಾನ್ ತನ್ನ ಬಳಿಯೇ ಇರಿಸಿಕೊಂಡಿದ್ದನು. ಅನುಮಾನಗೊಂಡ ರಾಜಾನಾಯ್ಕ ಅವರು ಬ್ಯಾಂಕ್ಗೆ ತೆರಳಿ ಪರಿಶೀಲಿಸಿದಾಗ, ಅವರ ಖಾತೆಗಳ ಮೂಲಕ ಕೋಟ್ಯಾಂತರ ರೂಪಾಯಿ ವರ್ಗಾವಣೆಯಾಗಿರುವುದು ಮತ್ತು ಈ ಖಾತೆಗಳ ಮೇಲೆ ಈಗಾಗಲೇ ದೇಶದ ವಿವಿಧೆಡೆ ಹಲವು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಾದ ಸೂರಜ್ ಸಾಲ್ಯಾನ್ ಮತ್ತು ರೋಷನ್ ಸೋನ್ಸ್ ಎಂಬುವವರು ತನ್ನ ಖಾತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ರಾಜಾನಾಯ್ಕ ದೂರು ನೀಡಿದ್ದಾರೆ. ಪೊಲೀಸರು ಐಟಿ ಆಕ್ಟ್ ಹಾಗೂ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.