LATEST NEWS
ಮಳೆಗಾಲದ ಪ್ರಾಕೃತಿಕ ಸಮಸ್ಯೆಗಳ ನಿರ್ವಹಣೆಗೆ ಉಡುಪಿ ಜಿಲ್ಲಾಡಳಿತದ “ಉಡುಪಿ ಹೆಲ್ಪ್ ಆ್ಯಪ್”
ಮಳೆಗಾಲದ ಪ್ರಾಕೃತಿಕ ಸಮಸ್ಯೆಗಳ ನಿರ್ವಹಣೆಗೆ ಉಡುಪಿ ಜಿಲ್ಲಾಡಳಿತದ ಉಡುಪಿ ಹೆಲ್ಪ್ ಆ್ಯಪ್
ಉಡುಪಿ, ಜೂನ್ 11 (ಕರ್ನಾಟಕ ವಾರ್ತೆ) : ಜಿಲ್ಲಾ ಕೇಂದ್ರ ಉಡುಪಿ ನಗರದಲ್ಲಿ ಮಳೆಗಾಲದಲ್ಲಿ ಎದುರಾಗುವ ವಿವಿಧ ಪ್ರಾಕೃತಿಕ ಸಮಸ್ಯೆಗಳ ಕ್ಷಿಪ್ರ ನಿರ್ವಹಣೆಗೆ ಜಾರಿಗೆ ತಂದಿರುವ ಹೊಸ ಆ್ಯಪ್ “ಉಡುಪಿ ಹೆಲ್ಪ್” Udupi Help App ಅನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರು ಮಂಗಳವಾರ ಬಿಡುಗಡೆಗೊಳಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಚಿವರು ಈ ಹೊಸ ಆ್ಯಪ್ ನ್ನು ಬಿಡುಗಡೆಗೊಳಿಸಿದರು. ನಾಗರೀಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಉಡುಪಿ ಜಿಲ್ಲಾಡಳಿತ ಉತ್ತಮ ಕಾರ್ಯ ಕೈಗೊಂಡಿದೆ. ಮಳೆಗಾಲದಲ್ಲಿ ಹಲವಾರು ರೀತಿಯ ಪ್ರಾಕೃತಿಕ ಸಮಸ್ಯೆಗಳು ಎದುರಾಗುತ್ತಿವೆ. ಇವುಗಳಿಗೆ ಸ್ಪಂದನೆ ತುರ್ತು ಅಗತ್ಯವಾಗಿದೆ. ಉಡುಪಿ ಹೆಲ್ಪ್ ಆ್ಯಪ್ ಮೂಲಕ ಜಿಲ್ಲಾಡಳಿತವು ನಾಗರೀಕರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಆಡಳಿತಕ್ಕೆ ತಲುಪಿಸಲು ಅನುಕೂಲ ಮಾಡಿದ್ದು, ಜನರು ಕ್ಷಿಪ್ರವಾಗಿ ಪರಿಹಾರ ಪಡೆಯಬಹುದು ಎಂದು ಸಚಿವೆ ಜಯಮಾಲಾ ಹೇಳಿದರು.
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಉಡುಪಿ ಹೆಲ್ಪ್ ನಾಗರೀಕರ ದೂರುಗಳಿಗೆ ಆರು ಗಂಟೆಗಳೊಳಗೆ ನಗರಸಭೆ ಸ್ಪಂದಿಸಲಿದೆ. ಫೋಟೋ ಮತ್ತು ವೀಡಿಯೋ ಅಪ್ ಲೋಡ್ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಮತ್ತಿತರರು ಇದ್ದರು. ಸಾರ್ವಜನಿಕರು ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಆ್ಯಪ್ ನ್ನು ಡೌನ್ ಲೋಡ್ ಮಾಡಬಹುದು.