ಉಡುಪಿ ಜುಲೈ 05: ತುಳುನಾಡಿನ ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ವಿನೂತನ ಗ್ರಾಮೀಣ ಕ್ರೀಡಾಕೂಟ ‘ಬಲೇ ಕೆಸರ್’ಡ್ಡ್ ಗೊಬ್ಬುಗ’ (ಬನ್ನಿ ಕೆಸರಿನಲ್ಲಿ ಆಡೋಣ) ಭಾನುವಾರ ಪರೀಕದ ಅರಮನೆಯ ಬಾಕ್ಯಾರು ಗದ್ದೆಯಲ್ಲಿ ಅತ್ಯಂತ ವೈಭವದಿಂದ ಜರುಗಿತು. ಶ್ರೀಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ ಪರೀಕ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಸಾರ್ವಜನಿಕರೊಂದಿಗೆ ಬೆರೆತು, ಖುದ್ದಾಗಿ ಹುಲಿಕುಣಿತಕ್ಕೆ ಹೆಜ್ಜೆ ಹಾಕುವ ಮೂಲಕ ಇಡೀ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.

ಕೆಸರುಮಯ ಗದ್ದೆಯಲ್ಲಿ ಗ್ರಾಮದ ನೂರಾರು ಮಹಿಳೆಯರು, ಪುರುಷರು ಹಾಗೂ ಮಕ್ಕಳು ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳಲ್ಲಿ ಸಡಗರದಿಂದ ಪಾಲ್ಗೊಂಡಿದ್ದರು.
ಮಳೆಗಾಲದ ಆರಂಭದೊಂದಿಗೆ ಗ್ರಾಮೀಣ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಕೂಟದಲ್ಲಿ ಓಟದ ಸ್ಪರ್ಧೆ, ಕೆಸರುಗದ್ದೆ ಹಗ್ಗಜಗ್ಗಾಟ ಸೇರಿದಂತೆ ವಿವಿಧ ವಿಶಿಷ್ಟ ಆಟಗಳು ನಡೆದವು. ಇವೆಲ್ಲದರ ನಡುವೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ‘ನಿಧಿ ಶೋಧನೆ’ ಎಂಬ ವಿನೂತನ ಸ್ಪರ್ಧೆಯು ಪ್ರೇಕ್ಷಕರ ಮತ್ತು ಕ್ರೀಡಾಳುಗಳ ವಿಶೇಷ ಗಮನ ಸೆಳೆಯಿತು. ನೂರಾರು ಮಂದಿ ಕೆಸರಿನ ಗದ್ದೆಯಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ ದೃಶ್ಯ ರೋಮಾಂಚನಕಾರಿಯಾಗಿತ್ತು.

ಈ ವಿಶೇಷ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ತಮ್ಮ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದರು. ಸಾಮಾನ್ಯವಾಗಿ ಕಟ್ಟುನಿಟ್ಟಿನ ಆಡಳಿತಾತ್ಮಕ ಉಡುಪಿನಲ್ಲಿ, ಕಚೇರಿಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದ ಜಿಲ್ಲಾಧಿಕಾರಿಗಳನ್ನು ತೀರ ಹತ್ತಿರದಿಂದ ಕಂಡ ಗ್ರಾಮಸ್ಥರು ಖುಷಿಪಟ್ಟರು. ಅಷ್ಟಕ್ಕೇ ನಿಲ್ಲದೆ, ಕರಾವಳಿಯ ಹೆಮ್ಮೆಯ ಕಲೆಯಾದ ಹುಲಿಕುಣಿತದ ಹಾಡಿಗೆ ಡಿಸಿ ಸ್ವರೂಪ ಅವರು ಸಾರ್ವಜನಿಕರ ಜೊತೆ ಸರಿಸಮನಾಗಿ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.

ಜಿಲ್ಲಾ ಉನ್ನತ ಅಧಿಕಾರಿಯೊಬ್ಬರು ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಗ್ರಾಮೀಣ ಜನರೊಂದಿಗೆ ಕೆಸರುಗದ್ದೆಯ ಬದಿಯಲ್ಲಿ ನಿಂತು ಹುಲಿವೇಷಕ್ಕೆ ಹೆಜ್ಜೆ ಹಾಕಿದ ಅಪರೂಪದ ನಡೆ ಇಡೀ ಜಿಲ್ಲೆಯಾದ್ಯಂತ ಭಾರಿ ಪ್ರಶಂಸೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ವೈರಲ್ ಆಗಿವೆ.