ಉಡುಪಿ ಜುಲೈ 04: ನಗರದ ಹಳೇ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಬೆಳಗ್ಗಿನ ಜಾವ ಕಾನೂನು ಬಾಹಿರವಾಗಿ ಸ್ಯಾಚೆಟ್ (ಪೊಟ್ಟಣ) ಮದ್ಯ ಮಾರಾಟ ಮಾಡುತ್ತಿದ್ದ ಅಕ್ರಮ ದಂಧೆಯನ್ನು ಉಡುಪಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಲಾಗಿದ್ದು, ಆತನಿಂದ 4 ಲೀಟರ್ ಅಕ್ರಮ ಮದ್ಯ ಹಾಗೂ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಬಾಗಲಕೋಟೆ ಮೂಲದ, ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ಕಂಟ್ಯಪ್ಪ ಮೇಥಿ (32) ಬಂಧಿತ ಅಕ್ರಮ ಮದ್ಯ ಮಾರಾಟಗಾರ.

ಉಡುಪಿಯ ನಗರದ ಹೃದಯಭಾಗದಲ್ಲಿರುವ ಬಸ್ ನಿಲ್ದಾಣಗಳ ಆಸುಪಾಸಿನಲ್ಲಿ ಮುಂಜಾನೆ ಹೊತ್ತಿನಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ನಿಖರ ದೂರುಗಳು ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಕೇಳಿಬಂದಿದ್ದವು. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿಯ ಆಧಾರದ ಮೇಲೆ ಉಡುಪಿ ನಗರ ಠಾಣೆಯ ಪೊಲೀಸರು ಜಾಲ ಹೆಣೆದಿದ್ದರು.
ಶನಿವಾರ ಮುಂಜಾನೆ ಆರೋಪಿ ಕಂಟ್ಯಪ್ಪ ಮೇಥಿ ತನ್ನ ಸ್ಕೂಟರ್ನಲ್ಲಿ ಸಿಟಿ ಬಸ್ ನಿಲ್ದಾಣದ ಬಳಿ ಬಂದು, ಯಾರಿಗೂ ಅನುಮಾನ ಬಾರದಂತೆ ಬಚ್ಚಿಟ್ಟುಕೊಂಡಿದ್ದ ಮದ್ಯದ ಪೊಟ್ಟಣಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಮಾರಾಟಗಾರನನ್ನು ತಕ್ಷಣವೇ ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಳಿ ಇದ್ದ 4 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿದೆ. ಮದ್ಯ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.