LATEST NEWS
ದೆಹಲಿ ತಲುಪಿದ ಉಡುಪಿ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕದನ
ದೆಹಲಿ ತಲುಪಿದ ಉಡುಪಿ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕದನ
ಉಡುಪಿ ಮಾರ್ಚ್ 20: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ವಿವಾದ ಇದೀಗ ಬೆಂಗಳೂರಿನಿಂದ ದಿಲ್ಲಿಗೆ ವರ್ಗಾವಣೆಯಾಗಿದೆ. ಯಾವ ಕಾರಣಕ್ಕೂ ಶೋಭಾ ಕರಂದ್ಲಾಜೆಯನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಕೆಲನಾಯಕರು ಪಟ್ಟು ಹಿಡಿದಿದ್ದಾರೆ. ಆದರೆ ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಶೋಭಾ ಕರಂದ್ಲಾಜೆ ಪರವಾಗಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿ ಸಾಕಷ್ಟು ಜನವಿರೋಧ ಕಟ್ಟಿಕೊಂಡಿರುವ ಶೋಭಾ ಕರಂದ್ಲಾಜೆ ಈ ಬಾರಿ ಸ್ಪರ್ಧಿಸಿದರೆ ಕಾರ್ಯಕರ್ತರು ಕೂಡ ಕೈ ಕೊಡುವ ಸಾಧ್ಯತೆ ಇದೆ. ಹೀಗಾಗಿ ಪಕ್ಷದ ರಾಷ್ಟ್ರೀಯ ನಾಯಕರು ಸ್ಥಳೀಯ ವರದಿಗಳನ್ನು ಆಧರಿಸಿ ಹೊಸ ಅಭ್ಯರ್ಥಿಗಳ ಆಯ್ಕೆಗೆ ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತಂತೆ ನಿನ್ನೆ ರಾತ್ರಿ 2.35 ವರೆಗೆ ಈ ವಿಚಾರವಾಗಿ ದೀರ್ಘವಾದ ಚರ್ಚೆ ನಡೆದಿದೆ. ಈ ಚರ್ಚೆ ಇಂದು ಕೂಡ ಮುಂದುವರೆಯಲಿದ್ದು ಸಂಜೆ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೀನುಗಾರಿಕಾ ಮುಖಂಡ ಯಶ್ಪಾಲ್ ಸುವರ್ಣ ಅವರ ಹೆಸರು ಮುಂಚೂಣಿಯಲ್ಲಿದ್ದು ಹಿರಿಯ ನಾಯಕ ಜಯಪ್ರಕಾಶ್ ಹೆಗಡೆ ಅವರ ಹೆಸರು ಕೂಡ ಪ್ರಸ್ತಾಪವಾಗಿದೆ.
ಆದರೆ ಜಯಪ್ರಕಾಶ್ ಹೆಗಡೆ ಅವರಿಗೆ ಟಿಕೆಟು ಸಿಗುವ ಸಾಧ್ಯತೆ ಕಡಿಮೆ. ಬಂಟ ಸಮುದಾಯಕ್ಕೆ ಈಗಾಗಲೇ ಜಿಲ್ಲಾಧ್ಯಕ್ಷ ಸ್ಥಾನ,ಐದು ಶಾಸಕ ಸ್ಥಾನಗಳು ಲಭಿಸಿದ್ದು ಇನ್ನಷ್ಟು ಸ್ಥಾನಗಳನ್ನು ಕೊಟ್ಟರೆ ಜಾತಿವಾರು ಲೆಕ್ಕಾಚಾರ ಏರುಪೇರಾಗುವ ಸಾಧ್ಯತೆ ಇದೆ.
ಬಿಜೆಪಿ ವಿರುದ್ಧ ಬಿಲ್ಲವ ಮತ್ತು ಇತರ ಹಿಂದುಳಿದ ವರ್ಗಗಳು ತಿರುಗಿ ಬೀಳುವ ಅಪಾಯವೂ ಇದೆ.ಜೊತೆಗೆ ಜಯಪ್ರಕಾಶ್ ಹೆಗಡೆ ಬಗ್ಗೆ ಆರ್ ಎಸ್ ಎಸ್ ಹಿರಿಯರು ವಿಶೇಷ ಒಲವು ಹೊಂದಿಲ್ಲ ಎನ್ನುವುದು ಎರಡನೇ ಸಂಗತಿ.
ಯಶಪಾಲ್ ಸುವರ್ಣ ಆಯ್ಕೆ ಬಗ್ಗೆ ಕ್ಷೇತ್ರದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು ದಿಲ್ಲಿಯಲ್ಲಿ ಇವರ ಹೆಸರು ಸಾಕಷ್ಟು ಬಾರಿ ಪ್ರಸ್ತಾಪವಾಗಿದೆ ಇಡೀ ದೇಶದಲ್ಲಿ ಮೀನುಗಾರ ಸಮುದಾಯದವರಿಗೆ ಒಂದು ಸ್ಥಾನವನ್ನಾದರೂ ಕೊಡಬೇಕಾಗಿದ್ದು ಅದನ್ನು ಉಡುಪಿ ಯಿಂದಲೇ ಕೊಡುವ ಸಾಧ್ಯತೆ ಇದೆ.ಸಂಘ ಪರಿವಾರದ ಕಟ್ಟಾಳು ಎಂದೇ ಗುರುತಿಸಲ್ಪಟ್ಟಿರುವ ಯಶ್ ಪಾಲ್ ಬಗ್ಗೆ ಕಾರ್ಯಕರ್ತ ವಲಯದಲ್ಲಿ ಅಪಾರ ಬೆಂಬಲವಿದೆ.
ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಕಣಕ್ಕಿಳಿಯುವುದು ಖಚಿತವಾದ ಹಿನ್ನೆಲೆಯಲ್ಲಿ ಅವರಿಗೆ ವಿರುದ್ಧವಾಗಿ ಮತ್ತೊಬ್ಬ ಮೀನುಗಾರ ಮುಖಂಡ ಯಶ್ ಪಾಲ್ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ದಟ್ಟವಾಗಿದೆ.
You must be logged in to post a comment Login