ಬೆಂಗಳೂರು ನವೆಂಬರ್ 24: ರೈಲ್ವೆ ಹಳಿ ದಾಟುವ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ಚಿಕ್ಕಬಾಣಾವರ ನಿಲ್ದಾಣದ ಬಳಿ ಸಂಭವಿಸಿದೆ.


ಮೃತರನ್ನು ಜಸ್ಟಿನ್ ಜೋಸೆಫ್ (21) ಹಾಗೂ ಸ್ಟೆರಿನ್ ಎಲ್ಜಾ ಸಜಿ (19) ಎಂಬವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಾಣಾವರ ಠಾಣೆ ಪೊಲೀಸರು ಮೃತರ ಪೋಷಕರಿಗೆ ಮಾಹಿತಿ ರವಾನಿಸಿದ್ದಾರೆ.

ಕೇರಳದ ಪಟ್ಟನಂತಿಟ್ಟ ಮೂಲದವರಾದ ಇಬ್ಬರೂ ಬೆಂಗಳೂರಿನ ಸಪ್ತಗಿರಿ ನರ್ಸಿಂಗ್​ ಕಾಲೇಜಿನಲ್ಲಿ ಬಿಎಸ್‌ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್​ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ಸಂಜೆ ಚಿಕ್ಕಬಾಣಾವರ ನಿಲ್ದಾಣದ ಬಳಿ ಹಳಿ ದಾಟುವಾಗ ಸೂಪರ್ ಫಾಸ್ಟ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರ ವಿವರಗಳನ್ನು ಪರಿಶೀಲಿಸಿದ ನಂತರ ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳು ಹಳಿ ದಾಟಲು ಪ್ರಯತ್ನಿಸಿದಾಗ ರೈಲು ಅತಿ ವೇಗದಲ್ಲಿ ಬಂದಿದ್ದು, ಅವರು ಹಳಿಯಿಂದ ಹೊರನಡೆಯಲು ಸಾಧ್ಯವಾಗದಿದ್ದುರಿಂದ ಈ ಅವಘಡ ಸಂಭವಿಸಿದೆ ಎಂದು‌ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

Share Information