ತೆಲುಗು ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ತೆಲುಗಿನ ಮಾಜಿ ಸ್ಪರ್ಧಿ ಆಶು ರೆಡ್ಡಿ (Ashu Reddy) ಅವರು ಬೃಹತ್ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಅನಿವಾಸಿ ಭಾರತೀಯ ಯುವಕನೊಬ್ಬನಿಂದ ಸುಮಾರು 9.35 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹೈದರಾಬಾದ್ ಪೊಲೀಸರು ನಟಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಹೈದರಾಬಾದ್ನ ಶೇಕ್ಪೇಟ್ ನಿವಾಸಿ ಸತ್ಯನಾರಾಯಣ ಎಂಬುವವರು ಹೈದರಾಬಾದ್ನ ಸೆಂಟ್ರಲ್ ಕ್ರೈಮ್ ಸ್ಟೇಷನ್ (CCS) ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಮಗ ಧರ್ಮೇಂದ್ರ ಲಂಡನ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2018ರಲ್ಲಿ ಆಶು ರೆಡ್ಡಿ ಅವರೊಂದಿಗೆ ಪರಿಚಯವಾಗಿತ್ತು. ಈ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿ, ಇಬ್ಬರೂ ಮದುವೆಯಾಗುವ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರರ ಪ್ರಕಾರ, 2018 ರಿಂದ 2025 ರ ಅವಧಿಯಲ್ಲಿ ಸಿನಿಮಾ ಹೂಡಿಕೆ, ಸಾಲ ತೀರಿಸುವಿಕೆ ಮತ್ತು ವೈಯಕ್ತಿಕ ಐಷಾರಾಮಿ ಜೀವನದ ಹೆಸರಿನಲ್ಲಿ ಆಶು ರೆಡ್ಡಿ ಅವರು ಧರ್ಮೇಂದ್ರ ಅವರಿಂದ ಸುಮಾರು 9.35 ಕೋಟಿ ರೂಪಾಯಿ ಪಡೆದಿದ್ದಾರೆ. ಈ ಹಣದಲ್ಲಿ ಹೈದರಾಬಾದ್ನ ಲಾಂಕೋ ಹಿಲ್ಸ್ನಂತಹ ಪ್ರತಿಷ್ಠಿತ ಪ್ರದೇಶಗಳಲ್ಲಿ ಫ್ಲ್ಯಾಟ್, ಐಷಾರಾಮಿ ಕಾರುಗಳು ಹಾಗೂ ಸುಮಾರು 5 ಕೆಜಿ ಚಿನ್ನವನ್ನು ಖರೀದಿಸಿ ನಟಿಯ ಹೆಸರಲ್ಲೇ ನೋಂದಣಿ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ನಟಿಯ ಸಹೋದರಿಯೂ 50 ಲಕ್ಷ ರೂಪಾಯಿ ಪಡೆದು ವಾಪಸ್ ನೀಡಿಲ್ಲ ಎಂದು ಉಲ್ಲೇಖಿಸಲಾಗಿದೆ.
ಹಣ ವಾಪಸ್ ಕೇಳಿದಾಗ ಮದುವೆಗೆ ನಿರಾಕರಿಸಿದ್ದ ನಟಿ, ಹಿರಿಯ ನಟಿ ಹೇಮಾ ಅವರ ಸಮ್ಮುಖದಲ್ಲಿ ನಡೆದ ಸಂಧಾನದ ವೇಳೆ 70 ಲಕ್ಷ ರೂ. ಮರಳಿಸಲು ಒಪ್ಪಿ ಚೆಕ್ ನೀಡಿದ್ದರು. ಆದರೆ ನಂತರ ಆ ಚೆಕ್ಗಳನ್ನು ನಾಶಪಡಿಸಿ ವಂಚಿಸಲಾಗಿದೆ ಎಂದು ಸಂತ್ರಸ್ತ ಕುಟುಂಬ ದೂರಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ಇದನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ವರ್ಗಾಯಿಸಿದ್ದಾರೆ. ಆಶು ರೆಡ್ಡಿ ಮತ್ತು ಅವರ ಕುಟುಂಬದ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದ್ದು, ಬ್ಯಾಂಕ್ ವಹಿವಾಟುಗಳ ಪರಿಶೀಲನೆ ನಡೆಯುತ್ತಿದೆ. ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿರುವ ಆಶು ರೆಡ್ಡಿ, “ನನ್ನ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಸತ್ಯ ಶೀಘ್ರವೇ ಹೊರಬರಲಿದೆ,” ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದಾರೆ.