ಮಂಗಳೂರು ಡಿಸೆಂಬರ್ 21: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ದ ಕ್ರಮಕೈಗೊಂಡಿಲ್ಲ ಎಂದು ಎಸ್ಡಿಪಿಐ ಕಾರ್ಯಕರ್ತರು ನಗರದ ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಿದ್ದರು, ಈ ವೇಳೆ ಮಂಗಳೂರು ಪೊಲೀಸರು ಕೇವಲ ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಸಂಘಪರಿವಾರದ ಕಾರ್ಯಕರ್ತರನ್ನು ಬಂಧನ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು, ಇದೀಗ ಈ ಆರೋಪಗಳಿಗೆ ಸರಿಯಾಗೇ ತಿರುಗೇಟು ನೀಡಿರುವ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸುಮ್ನೆ ಆರ್ ಟಿಐ ಹಾಕಿ 30 ದಿನ ವೆಸ್ಟ್ ಯಾಕೆ ಮಾಡ್ತೀರಾ- ಪುಲ್ ಡಿಟೈಲ್ಸ್ ನಾನೇ ಕೊಡ್ತಿನಿ ಎಂದು ಹೇಳಿದ್ದಾರೆ.

ಎಸ್ಡಿಪಿಐ ಪ್ರತಿಭಟನೆಯಲ್ಲಿ ಆರ್ಟಿಐ ಮೂಲಕ ಜಿಲ್ಲೆಯ ಪೊಲೀಸರ ಕ್ರಮದ ಬಗ್ಗೆ ಮಾಹಿತಿ ಪಡೆಯುತ್ತೇವೆ ಎಂದು ಹೇಳಿದ್ದರು. ಇದಕ್ಕೆ ಕೌಂಟರ್ ನೀಡಿರುವ ಸುಧೀರ್ ರೆಡ್ಡಿ, ನೀವು ಆರ್ಟಿಐ ಕೇಳಿ ಒಂದು ತಿಂಗಳು ವೇಸ್ಟ್ ಮಾಡೋದು ಬೇಡ. ಈ ಕೂಡಲೇ ಹಿಂದು- ಮುಸ್ಲಿಂ ಅಪರಾಧಿಗಳ ಸಂಖ್ಯೆ ಮತ್ತು ಎಷ್ಟು ಏಕ್ಷನ್ ಆಗಿದೆ ಎಂದು ವಿವರ ಕೊಡುತ್ತೇನೆಂದು ಹೇಳಿ ಅದರ ಲಿಸ್ಟನ್ನು ಹಾಕಿದ್ದಾರೆ. ಈ ಭಾಗದಲ್ಲಿ ಯಾವುದೋ ವಿಚಾರದಲ್ಲಿ ಸಂತ್ರಸ್ತನಾಗಿ ನಟಿಸಿ ಇನ್ಯಾರೋ ಅಮಾಯಕರನ್ನು ಬಲಿಪಶು ಮಾಡುವುದು ಕಾಮನ್ ಎನ್ನುವಂತಾಗಿದೆ ಎಂದು ಟೀಕಿಸಿದ್ದಾರೆ.

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 807 ರೌಡಿಶೀಟರ್ ಗಳಿದ್ದು ಅದರಲ್ಲಿ 474 ಹಿಂದುಗಳು, 321 ಮುಸ್ಲಿಮರಿದ್ದಾರೆ. 12 ಮಂದಿ ಇತರರು ಇದ್ದಾರೆ. ಬಾಂಡ್ ಕೊಟ್ಟು ಉಲ್ಲಂಘಿಸಿದ್ದ ಪ್ರಕರಣದಲ್ಲಿ 39 ಹಿಂದುಗಳಿದ್ದು ಅವರಿಂದ 7.40 ಲಕ್ಷ ದಂಡ ಕಟ್ಟಿಸಲಾಗಿದೆ. 13 ಮಂದಿ ಮುಸ್ಲಿಮರಿದ್ದು 2.40 ಲಕ್ಷ ದಂಡ ತೆತ್ತಿದ್ದಾರೆ. ಬಜ್ಪೆಯಲ್ಲಿ ಕೊಲೆ ಸರಣಿಯ ಬಳಿಕ ಬಜರಂಗದಳ ಮತ್ತು ಎಸ್ಡಿಪಿಐ ಪ್ರತಿಭಟನಾ ಸಭೆಗೂ ಮುನ್ನ ಯಾವುದೇ ತೊಂದರೆಯಾದರೆ ನೀವೇ ಹೊಣೆಯೆಂದು ಬರೆಸಿಕೊಂಡು ತಲಾ ಎರಡು ಲಕ್ಷ ಬಾಂಡ್ ಪಡೆಯಲಾಗಿತ್ತು ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ನಾವು ಯಾವುದೇ ಪ್ರಕರಣದಲ್ಲಿ ಸಾಕ್ಷಿಗಳನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ವಿನಾ ಸಮುದಾಯಗಳನ್ನು ಟಾರ್ಗೆಟ್ ಮಾಡಿಕೊಂಡಿಲ್ಲ. ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ಇದೆ, ಇದನ್ನು ಮುಂದೆಯೂ ಚಲಾಯಿಸುತ್ತಾರೆ. ನಾವು ನೀಡಿರುವ ಅಂಕಿ ಅಂಶಗಳು ವಾಸ್ತವ ಏನಿದೆ ಅನ್ನುವುದನ್ನು ತೋರಿಸುತ್ತವೆ. ಬಾಂಡ್ ಪ್ರಕಾರ ನಡೆದುಕೊಳ್ಳದಿದ್ದರೆ ಬಾಂಡ್ ಮೊತ್ತವನ್ನು ಮುಟ್ಟುಗೋಲು ಹಾಕುತ್ತೇವೆ. ಕಳೆದ ಆರು ತಿಂಗಳಲ್ಲಿ ಹಿಂದು- ಮುಸ್ಲಿಂ ಸಂಘಟನೆಗಳನ್ನು ಸಮಾನವಾಗಿ ನೋಡಿದ್ದೇವೆ. ಶಾರದೋತ್ಸವ ಮೆರವಣಿಗೆಗೂ ಅವಕಾಶ ನೀಡಿದ್ದು, ಎಸ್ಡಿಪಿಐ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೂ ಅವಕಾಶ ನೀಡಿದ್ದೇವೆ.
ಆದರೆ ಕೆಲವರು ಸತ್ಯವನ್ನು ಮುಚ್ಚಿಟ್ಟು ಅರ್ಧ ಮಾಹಿತಿಗಳನ್ನು ಹಂಚಿಕೊಂಡು ಅಮಾಯಕರ ಮನಸ್ಸನ್ನು ಕೆಡಿಸುತ್ತಾರೆ. ಹೀಗಾಗಿ ಇರುವ ಸತ್ಯವನ್ನು ಹೊರಗಿಟ್ಟಿದ್ದೇನೆ. ಆದರೆ, ಯಾವುದೇ ಅಪರಾಧ ವಿಚಾರದಲ್ಲಿ ಪೊಲೀಸರಿಗೆ ಬ್ಯಾಲೆನ್ಸ್ ಮಾಡಿಕೊಂಡು ಕ್ರಮ ಜರುಗಿಸುವುದಕ್ಕೆ ಆಗುವುದಿಲ್ಲ. ಆಯಾ ಸಮುದಾಯದವರೇ ತಮ್ಮವರನ್ನು ಅಪರಾಧ ಲೋಕದಿಂದ ವಿಮುಖರನ್ನಾಗಿಸಿದರೆ ಅಪರಾಧ ಸಂಖ್ಯೆಯಲ್ಲು ಇಳಿಕೆಯಾಗುತ್ತದೆ. ಪೊಲೀಸರ ಏಕ್ಷನ್ ಕೂಡ ಹಾಗೆಯೇ ಇರುತ್ತದೆ ಎಂದು ಪೊಲೀಸ್ ಕಮಿಷನರ್ ಪ್ರತಿಕ್ರಿಯಿಸಿದ್ದಾರೆ.



