ಮಂಗಳೂರು ಜನವರಿ 29: ಕದ್ರಿ ಜೋಗಿ ಮಠ ಆವರಣದಲ್ಲಿರುವ ಜೋಗಿ ಮಠ ಜೀರ್ಣೋದ್ಧಾರ ಮತ್ತು ಕಾರ್ಯ ನಿರ್ವಹಣ ಸಮಿತಿಯ ಕಚೇರಿಗೆ ನುಗ್ಗಿ ಕಳ್ಳರು ದೈವ ಮತ್ತು ದೇವರಿಗೆ ಸಂಬಂಧಿಸಿದ ಬೆಳ್ಳಿಯ ಆಭರಣ ಹಾಗೂ ನಗದು ಕಳವು ಮಾಡಿದ್ದಾರೆ.

ಧೂಮಾವತಿ ದೈವಕ್ಕೆ ಮತ್ತು ಗಣಪತಿ ದೇವರಿಗೆ ಸಂಬಂಧಿಸಿದ ಆವರಣಗಳು ಸಮಿತಿಯಲ್ಲಿದ್ದು, ಇದನ್ನು ಸಾಮಾನ್ಯವಾಗಿ ಕದ್ರಿ ಮುಂಡಾಣದಲ್ಲಿರುವ ಜಗಜೀವನದಾಸ್ ಎಂಬವರ ಮನೆಯಲ್ಲಿ ಇರಿಸಲಾಗುತ್ತದೆ. ಮುಂಬರುವ ಫೆಬ್ರವರಿ ತಿಂಗಳ ಎರಡನೇ ವಾರ ಧೂಮಾವತಿ ನೇಮೋತ್ಸವ ನಡೆಯುವ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಜಗಜೀವನದಾಸರ ಮನೆಯಿಂದ ಧೂಮಾವತಿ ದೈವ ಮತ್ತು ಗಣಪತಿ ದೇವರ ಬೆಳ್ಳಿಯ ಆಭರಣಗಳನ್ನು ತಂದು ಕಚೇರಿಯಲ್ಲಿ ಇರಿಸಲಾಗಿತ್ತು. ಜ.26ರಂದು ದೂರುದಾರರಾದ ಸಮಿತಿ ಅಧ್ಯಕ್ಷ ಹರಿನಾಥ ಎಂ ಹಾಗೂ ಗೋಪಿನಾಥ ಜೋಗಿಯವರು ಮಧ್ಯಾಹ್ನ 2 ಗಂಟೆಗೆ ಕಚೇರಿಗೆ ಬೀಗ ಹಾಕಿ ಹೋಗಿದ್ದರು. ಜ.27ರಂದು ಬೆಳಗ್ಗೆ 11 ಗಂಟೆಗೆ ದಿನೇಶ್ ಜೋಗಿ ಎಂಬವರು ಬಂದು ನೋಡಿದಾಗ ಕಚೇರಿಯ ಮುಂಬಾಗಿಲನ್ನು ಒಡೆದಿದ್ದು, ಇತರ ದೂರುದಾರರನ್ನು ಕರೆದಿದ್ದಾರೆ. ಬಂದು ನೋಡಿದಾಗ ಬೀಗ ತುಂಡಾಗಿ ಬಿದ್ದಿತ್ತು, ಅಲ್ಲದೆ ಧೂಮಾವತಿ ದೈವದ ಆಭರಣಗಳಿದ್ದ ಬ್ಯಾಗ್ ನಲ್ಲಿದ್ದ 8 ಬೆಳ್ಳಿಯ ಗುಬ್ಬೆಗಳ ಪೈಕಿ 7 ಗುಬ್ಬೆಗಳನ್ನು, ಎರಡು ಬೆಳ್ಳಿಯ ಅರ್ಧ ಚಂದ್ರಾಕೃತಿಯ ಆಭರಣಗಳ ಪೈಕಿ ಒಂದು ಬೆಳ್ಳಿಯ ಅರ್ಧ ಚಂದ್ರಾಕೃತಿಯ ಆಭರಣ, ಎರಡು ಬೆಳ್ಳಿಯ ದೊಡ್ಡ ಹೂವುಗಳ ಪೈಕಿ ಒಂದು ದೊಡ್ಡ ಬೆಳ್ಳಿಯ ಹೂವು, ಎರಡು ಬೆಳ್ಳಿಯ ಸಣ್ಣ ಹೂವುಗಳ ಪೈಕಿ ಒಂದು ಬೆಳ್ಳಿಯ ಸಣ್ಣ ಹೂವು, ಒಂದು ಗಂಧದ ಗಿಂಡಿ ಬಟ್ಟಲು ಕಳವಾಗಿದೆ.

ಗಣಪತಿ ದೇವರ ಆಭರಣಗಳ ಬಟ್ಟೆಯ ಗಂಟನ್ನು ಬಿಚ್ಚಿ ಪರಿಶೀಲಿಸಿದಾಗ ಇದ್ದ ಎರಡು ಬೆಳ್ಳಿಯ ಸೊಂಡಿಲುಗಳ ಕಟ್ಟಗಳ ಪೈಕಿ ಒಂದು ಸೊಂಡಿಲು ಕಟ್ಟ, ಗಣಪತಿಯ ನಾಲ್ಕು ಬೆಳ್ಳಿಯ ಕೈಕಡಗಗಳ ಪೈಕಿ ಮೂರು ಕೈಕಡಗಗಳು, ಗಣಪತಿಯ ಬೆಳ್ಳಿಯ ಕಿವಿಯ ಒಂದು ಕುಂಡಲಗ, ಬೆಳ್ಳಿಯ ಎರಡು ಕಾಲ್ಗಡಗಳನ್ನು ಕೂಡಾ ಕಳವು ಮಾಡಲಾಗಿದೆ. ಕಳವಾದ ಸೊತ್ತು ಹಾಗೂ ನಗದುವಿನ ಒಟ್ಟು ಮೊತ್ತ 1,30,000 ರೂ. ಆಗಿರುತ್ತದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.