ಪುತ್ತೂರು, ನವೆಂಬರ್ 29: ಶ್ರೀರಾಮ ಧೂತ ಹನುಮಂತನನ್ನು ಭಕ್ತರು ದೇವತಾ ರೂಪವಾಗಿಯೇ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಟುಂಬವೊಂದು ಈ ವಾನರ ಮೂರ್ತಿಯನ್ನು ದೈವದ ರೂಪದಲ್ಲಿ ಆರಾಧಿಸಿಕೊಂಡು ಬರುತ್ತಿದೆ. ತುಳುನಾಡ ದೈವಾರಾಧನೆಯಲ್ಲಿ ಇತರೆ ದೈವಗಳಿಗೆ ಯಾವ ರೀತಿ ಕೋಲ ನೇಮಗಳನ್ನು ನೀಡುತ್ತಾರೋ ಅದೇ ರೀತಿಯಲ್ಲಿ ಅಂಜನೇಯನಿಗೂ ಇಲ್ಲಿ ಕೋಲ ನಡೆಸಲಾಗುತ್ತಿದೆ.

ದೇವತಾ ಪೂಜೆಗಳಿಂದ ದೈವಾರಾಧನೆಯಲ್ಲೆ ಹೆಚ್ಚಿನ ನಿಷ್ಠೆ ಭಕ್ತಿ, ಭಯ ತುಂಬಿಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಕರಾವಳಿ ಭಾಗದ ಜನರು ಕರಾವಳಿ ಭಾಗದ ಪ್ರತಿಯೊಂದು ಕುಟುಂಬವೂ ಒಂದೊಂದು ದೈವಗಳನ್ನು ತಮ್ಮ ಕುಲದೇವರಾಗಿ ಆರಾಧಿಸಿಕೊಂಡು ಬರುತ್ತಿದೆ. ಆದ್ದರಿಂದಲೇ 400 ಕ್ಕೂ ಮಿಕ್ಕಿ ಹಲವು ದೈವಗಳ ಆರಾಧನೆಗಳು ಇಲ್ಲಿ ಆಚರಣೆಯಲ್ಲಿದೆ. ಶ್ರೀರಾಮನ ಬಂಟ ಹನುಮಂತನನ್ನು ದೇವರಂತೆಯೇ ಪೂಜಿಸಿಕೊಂಡು ಬರುತ್ತಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇಳಿಂತಾಜೆ ಮನೆತನವು ಅಂಜನೇಯನನ್ನು ದೇವ ಸಂಭೂತನನ್ನಾಗಿ ಆರಾಧಿಸುತ್ತಿದೆ. ಇತರ ಎಲ್ಲಾ ದೈವ ಕೋಲಗಳಿಂದ ಇದು ಸಂಪೂರ್ಣ ಭಿನ್ನವಾದುದು. ಹನುಮಂತನ ವೇಷಧಾರಿ ಇಲ್ಲಿ ಸಂಪೂರ್ಣ ಮೌನಿಯಾಗುತ್ತಾನೆ. ನೇಮದ ಹಿಂದಿನ ದಿನವೇ ತನ್ನ ಮೌನ ವೃತವನ್ನು ಆಚರಿಸುವ ಈತ ಕೋಲ ಮುಗಿಯುವವರೆಗೂ ಯಾರೊಂದಿಗೂ ಮಾತನಾಡುವಂತಿಲ್ಲ. ಇತನೊಂದಿಗೆ ದೈವಕ್ಕೆ ಸಹಾಯಕವಾಗುವ ಇನ್ನಿಬ್ಬರೂ ಹಾಗೂ ಇಳಂತಾಜೆ ಮನೆತನದ ಯಜಮಾನನೂ ದೈವಕ್ಕೆ ಬಣ್ಣ ನೀಡುವ ಕಾರ್ಯಕ್ರಮದ ಬಳಿಕ ಮಾತನಾಡುವಂತಿಲ್ಲ. ಇತರೆ ದೈವ ಕೊಲಗಳಲ್ಲಿರುವಂತೆ ಇಲ್ಲಿ ವಾದ್ಯ ಘೋಷಗಳಿಲ್ಲ, ಏನಿದ್ದರೂ ಕೇವಲ ಜಾಗಟೆ, ತಾಳ ಹಾಗೂ ಡೋಲು ಮಾತ್ರ, ವಾನರಂತೆ ಜಿಗಿಯುತ್ತಾ ಸಾಗುವ ಹನುಮಂತ ವೇಷಧಾರಿಯ ಮುಂದೆ ಯಾರೂ ಬರುವಂತಿಲ್ಲ. ಮಾತನಾಡುವಂತಿಲ್ಲ. ಹಾಗೂ ಮಕ್ಕಳೂ ಸೇರಿದಂತೆ ಯಾರೂ ವೇಷಧಾರಿಯತ್ತ ಕೈ ತೋರಿಸುವಂತಿಲ್ಲ. ಅರ್ಧ ಗಂಟೆಗಳ ಕಾಲ ಇಲ್ಲಿ ಎಲ್ಲರೂ ಮೌನಿಗಳು.

ಕೃಷಿ ಚಟುವಟಿಕೆಗಳಿಗೆ ಹಾಗೂ ಹನುಮಂತನಿಗೆ ನೇರ ಸಾಮ್ಯತೆ ಇದೆ ಎನ್ನುವುದನ್ನು ತೋರಿಸುವ ಈ ದೈವದ ಕೋಲದಲ್ಲಿ ಹನುಮಂತ ವೇಷಧಾರಿಯು ಉಳುಮೆ ಮಾಡಿದ ಗದ್ದೆಯ ಬದಿಯಲ್ಲಿರುವ ಮರವನ್ನು ಹತ್ತಿ ಅದರಿಂದ ಎಲೆಗಳನ್ನು ತೆಗೆದು ಗದ್ದೆಯ ಮೇಲೆ ಹಾಕುತ್ತಾನೆ. ಎಷ್ಟು ಎಲೆಗಳು ಗದ್ದೆಯ ಮೇಲೆ ಬೀಳುತ್ತದೋ ಅದಕ್ಕಿಂತ ಹತ್ತು ಪಾಲು ಇಳುವರಿ ಆ ಗದ್ದೆಯಲ್ಲಿ ಬರುತ್ತದೆ ಎನ್ನುವುದು ಇವರ ನಂಬಿಕೆ.

ತಾನು ಬೆಳೆದ ಬೆಳೆಗಳಿಗೆ ಮಂಗಗಳ ಕಾಟವು ಹೆಚ್ಚಾದಾಗ ಇಲ್ಲಿನ ಜನ ಅಂಜನೇಯನ ಮೊರೆ ಹೋಗಿ ಆರಾಧನೆ ಮಾಡಿ, ಕೋಲದ ಸಮಯದಲ್ಲಿ ತಮ್ಮ ಪಾಲಿನ ಕೃಷಿ ಕಾಣಿಕೆಯನ್ನು ಅಂಜನೇಯನಿಗೆ ನೀಡುವುದು ವಾಡಿಕೆ. ಕಾಣಿಕೆ ಸ್ವೀಕರಿಸಿದ ಅಂಜನೇಯ ದೈವವು ಅದನ್ನು ಹಿಮ್ಮುಖವಾಗಿ ಎಸೆಯುವುದು ನಿಜಕ್ಕೂ ಕುತೂಹಲ ಕೆರಳಿಸುತ್ತಿದೆ.

Share Information