Connect with us

    DAKSHINA KANNADA

    ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ; ತಂದೆ-ಮಗನ ಬಂಧನ

    ಮಂಗಳೂರು, ನವೆಂಬರ್ 4: ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಂಗಳೂರು ನಗರದ ಕಾರ್‌ಸ್ಟ್ರೀಟ್‌ನಲ್ಲಿ ನಡೆದಿದೆ.

    ಕಾಂಕ್ರೀಟೀಕರಣಗೊಂಡ ರಸ್ತೆಯಲ್ಲಿ ಕಾರು ಹೋಗುವ ವಿಚಾರದಲ್ಲಿ ವಾಗ್ವಾದ ನಡೆದು ವ್ಯಕ್ತಿಯೊಬ್ಬರನ್ನು ಮಂಗಳೂರಿನ ಕಾರ್‌ಸ್ಟ್ರೀಟ್‌ ಬಳಿ ಕೊಲೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃಷ್ಣಾನಂದ ಕಿಣಿ ಮತ್ತು ಅವಿನಾಶ್ ಕಿಣಿ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ವಿನಾಯಕ್ ಕಾಮತ್ (46) ಎಂಬುವರು ಕೊಲೆಯಾಗಿದ್ದಾರೆ.

    ವಿನಾಯಕ ಕಾಮತ್ ಕುಟುಂಬ ನಗರದ ಕಾರ್ ಸ್ಟ್ರೀಟ್ ವೀರ ವೆಂಕಟೇಶ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯವಿದ್ದರು. ಈ ಅಪಾರ್ಟ್‌ ಮೆಂಟ್ ಪ್ರಮುಖ ಗೇಟ್ ಬಳಿ ಮಂಗಳೂರು ಮಹಾನಗರ ಪಾಲಿಕೆಯಿಂದ ಕಾಂಕ್ರೀಟ್ ಕಾಮಗಾರಿ ನಡೆದಿತ್ತು. ಈ ರಸ್ತೆಯಲ್ಲಿ ಕಾರು ಹೋಗುವ ವಿಚಾರದಲ್ಲಿ ವಿನಾಯಕ್ ಕಾಮತ್ ಹಾಗೂ ಕೃಷ್ಣಾನಂದ ಕಿಣಿ, ಅವಿನಾಶ್ ಕಿಣಿ ಮಧ್ಯೆ ಜಗಳವಾಗಿತ್ತು. ನ.3ರಂದು ರಾತ್ರಿ 11 ಗಂಟೆ ವೇಳೆ ಫ್ಲಾಟ್‌ನಲ್ಲಿರುವ ಕೆಲವರು ದೀಪಾವಳಿಯ ಪ್ರಯುಕ್ತ ಪಟಾಕಿ ಸಿಡಿಸುತ್ತಿದ್ದಾಗ ವಿನಾಯಕ ಕಾಮತ್ ಅಲ್ಲಿಗೆ ತೆರಳಿದ್ದರು. ಈ ಸಂದರ್ಭ ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ ಕಿಣಿ ಜಗಳವಾಡಿದ್ದು, ಮಾರಕಾಯುಧದಿಂದ ಚುಚ್ಚಿದ್ದಾರೆ.

    ಈ ಮಾರಣಾಂತಿಕ ಹಲ್ಲೆಯಿಂದ ವಿನಾಯಕ್ ಕಾಮತ್ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಅಪಾರ್ಟ್ ಮೆಂಟ್‌ ನಿವಾಸಿಗಳು ಕೊಡಿಯಾಲ್ ಬೈಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ವಿನಾಯಕ್ ಕಾಮತ್ ಅವರು ಚಿಕಿತ್ಸೆ ಫಲಿಸದೆ ತಡ ರಾತ್ರಿ 1.40 ರ ವೇಳೆಗೆ ಮೃತಪಟ್ಟಿದ್ದಾರೆ.

    ಈ ಬಗ್ಗೆ ಮೃತ ವಿನಾಯಕ ಕಾಮತ್‌ರ ಪತ್ನಿ ಬಂದರು ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply