KARNATAKA
ಪ್ರವಾಸಿಗರನ್ನು ಕಾಡಲ್ಲೇ ಬಿಟ್ಟುಬಂದ ಚಾಲಕ!
ಹಾಸನ, ಅಕ್ಟೋಬರ್ 23: ಪ್ರವಾಸಕ್ಕೆದು ತೆರಳಿದ್ದ ಕುಟುಂಬದ ಹತ್ತು ಜನ ಸದಸ್ಯರನ್ನು ಅರಣ್ಯದಲ್ಲಿ ಬಿಟ್ಟು ಬಂದ ಘಟನೆ ಬಂಡಿಪುರದಲ್ಲಿ ನಡೆದಿದೆ.
ಮೈಸೂರು, ಬಂಡಿಪುರ, ಮಲೈಮಹದೇಶ್ವರ ಬೆಟ್ಟ ಮತ್ತಿತರ ಸ್ಥಳಕ್ಕೆ ಪ್ರವಾಸಕ್ಕೆಂದು ಅ.18 ರಂದು ಹಾಸನದಿಂದ ಚಾಮುಂಡೇಶ್ವರಿ ಟೆಂಪೋ ಟ್ರಾವೆಲರ್ ಸಂಸ್ಥೆಯ ವಾಹನದಲ್ಲಿ ಕುಟುಂಬ ಪ್ರವಾಸಕ್ಕೆ ತೆರಳಿತ್ತು. ಬಲಮುರಿ ಜಲಪಾತಕ್ಕೆ ತೆರಳಿ ಊಟ ಮುಗಿಸಿದ ಬಳಿಕ ಚಾಲಕ ಬಂದು ವಾಹನ ಕೆಟ್ಟು ಹೋಗಿದೆ ಬೇರೆ ವಾಹನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅದರಂತೆ ಮಧ್ಯಾಹ್ನದಿಂದ ಕಾದು ಸುಸ್ತಾದ ಬಳಿಕ ರಾತ್ರಿ 7 ಗಂಟೆಯಲ್ಲಿ ಮತ್ತೊಂದು ಟೆಂಪೋ ಟ್ರಾವೆಲರ್ ಬಂತು. ಅಲ್ಲಿಂದ ಬಂಡಿಪುರದ ಕಡೆ ಪ್ರಯಾಣಿಸುತ್ತಿದ್ದೆವು. ಚಾಲಕ ಅತೀ ವೇಗವಾಗಿ ಓಡಿಸುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ನಿರ್ಲಕ್ಷಿಸಿ, ಗುಂಡ್ಲು ಪೇಟೆಯಲ್ಲಿ ಹಣಕ್ಕಾಗಿ ಒತ್ತಾಯಿಸಿದ ಎಂದು ದೂರಿದ್ದಾರೆ.
ಅಲ್ಲಿ ಮೂರು ಸಾವಿರ ರೂ. ನೀಡಿದ ಬಳಿಕ ರಾತ್ರಿ 9.15ಕ್ಕೆ ಬಂಡಿಪುರ ಅಭಯಾರಣ್ಯ ವಸತಿ ಗೃಹದಲ್ಲಿ ತಂಗಿದ್ದೆವು. ಆದರೆ ಚಾಲಕ ಪ್ರಶಾಂತ ಎಂಬಾತ ರಾತ್ರೋ ರಾತ್ರಿಯೇ ವಾಹನ ಸಹಿತ ಅಲ್ಲಿಂದ ಹೋಗಿದ್ದವರು ಬೆಳಗ್ಗೆ ಹಿಂತಿರುಗಿದರು. ಅ.20ರಂದು ಬೆಳಗ್ಗೆ ಸಫಾರಿ ವೀಕ್ಷಣೆಗೆ ಹೋಗಲು ಅಲ್ಲಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ನೀವು ಬೇರೆ ವಾಹನದಲ್ಲಿ ತೆರಳಿ ನಾನು ಬರುವುದಿಲ್ಲ ಎಂದು ಬೆದರಿಕೆಯೊಡ್ಡಿ ಅಲ್ಲಿಂದ ತೆರಳಿದ್ದ ಎಂದು ಆರೋಪಿಸಿದ್ದಾರೆ.
ಬಂಡಿಪುರದಿಂದ ಹಿಂತಿರುಗಲು ತೊಂದರೆಯಾಯಿತು. ಅಂತಿಮವಾಗಿ ಮೈಸೂರಿನ ಪೊಲೀಸ್ ಕಮಿಷನರ್ ಚಂದ್ರಗುಪ್ತ ಅವರಿಗೆ ಸಮಸ್ಯೆ ವಿವರಿಸಿ ವಿನಂತಿಸಲಾಗಿ ಅವರು ವ್ಯವಸ್ಥೆ ಕಲ್ಪಿಸಿದ ವಾಹನದಲ್ಲಿ ಅ. 21 ರಂದು ರಾತ್ರಿ 1 ಗಂಟೆಗೆ ಹಾಸನಕ್ಕೆ ತಲುಪಿದೆವು. ಈ ಸಮಸ್ಯೆ ಸೃಷ್ಟಿಸಿದಲ್ಲದೆ ಆನಂದ್ ಹಾಗೂ ತಮ್ಮ ಪತ್ನಿ ಮೇಲೆ ಹಲ್ಲೆಗೆ ಮುಂದಾದ ಪ್ರಶಾಂತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಾ. ದೇವನಾಯ್ಕ ದೂರು ನೀಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆಗಾಗಿ ವಾಹನ ಮಾಲೀಕ, ಚಾಲಕರನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ, ಕರೆ ಸ್ವೀಕರಿಸಲಿಲ್ಲ. ಡಾ.ದೇವರಾಜನಾಯ್ಕ ದೂರು ನೀಡಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಬಡಾವಣೆ ಠಾಣೆ ಸಿಪಿಐ ಕೃಷ್ಣರಾಜು ತಿಳಿಸಿದ್ದಾರೆ.
You must be logged in to post a comment Login