ಮಂಜೇಶ್ವರ ನವೆಂಬರ್ 03: ಮಂಗಳೂರಿನ ನಟೋರಿಯಸ್ ರೌಡಿಶೀಟರ್ ನೌಫಾಲ್ ಯಾನೆ ಟೋಪಿ ನೌಫಾಲ್ ರೈಲು ಡಿಕ್ಕಿಯಾಗಿ ಸಾವನಪ್ಪಿರುವ ಸಾಧ್ಯತೆ ಇದೆ ಎಂದು ಮರಣೋತ್ತರ ಪರಿಕ್ಷೆ ವರದಿಯಲ್ಲಿ ತಿಳಿದು ಬಂದಿದೆ. ಆದರೆ ಆತನ ಸಾವಿನ ಕುರಿತಂತೆ ಹಲವು ಸಂಶಯಗಳು ಇದ್ದು ಇಡೀ ಪ್ರಕರಣ ನಿಗೂಢವಾಗಿದೆ.

ಶನಿವಾರ ಬೆಳಗ್ಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿಯಲ್ಲಿ ನೌಫಾಲ್ ಮೃತದೇಹ ಲಭಿಸಿತ್ತು. ನೌಫಾಲ್ ಮಂಗಳೂರಿನ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದುದರಿಂದ ಯಾರೋ ಮಾತುಕತೆಗೆ ಕರೆದು ಕೊಲೆ ಮಾಡಿದ್ದಾರೆಂದು ಮಾಹಿತಿ ಲಭಿಸಿತ್ತು. ಕುತ್ತಿಗೆ, ತಲೆಯಲ್ಲಿ ರಕ್ತ ಜಿನುಗಿದ್ದು ಹೊಡೆದು ಹಾಕಿದ ರೀತಿಯ ಕಲೆಗಳಿದ್ದುದರಿಂದ ಯಾರೋ ಹತ್ಯೆ ಮಾಡಿದ್ದಿರಬಹುದೆಂಬ ಶಂಕೆಗಳಿದ್ದವು. ಆದರೆ ಕಾಸರಗೋಡು ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು ತಲವಾರಿನಿಂದ ಕಡಿದು ಆಗಿರುವ ಗಾಯಗಳಲ್ಲ. ಬದಲಿಗೆ ರೈಲು ಡಿಕ್ಕಿ ಹೊಡೆದು ಆಗಿರುವ ಗಾಯಗಳೆಂದು ಎಂದು ಮಾಹಿತಿ ನೀಡಿದ್ದಾರೆ.
Read This ಅಗಲಿದವರ ಆತ್ಮಕ್ಕೆ ಶಾಂತಿಕೋರಲು ಸ್ಮಶಾನದಲ್ಲಿ ವಿಶೇಷ ಪೂಜೆ – ಕ್ರೈಸ್ತಸಮುದಾಯದ ವಿಶೇಷ ಆಚರಣೆ
ಅಲ್ಲದೆ ಮಂಜೇಶ್ವರ ಪೊಲೀಸರು ನೌಫಾಲ್ ಸಾವು ಕೊಲೆಯಾಗಿದೆ ಎಂದು ನಂಬುವ ಯಾವುದೇ ಪುರಾವೆಗಳು ಇಲ್ಲಿಯ ತನಕ ದೊರೆತಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿವೆ. ಮಂಗಳೂರಿನ ಬಜಾಲಿನಿಂದ ಉಪ್ಪಳಕ್ಕೆ ಸ್ಕೂಟರಿನಲ್ಲೇ ನೌಫಾಲ್ ತೆರಳಿದ್ದ ಎನ್ನಲಾಗುತ್ತಿದೆ. ನೌಫಾಲ್ ನಿಜಕ್ಕೂ ರೈಲು ಹೊಡೆದು ಸತ್ತನೇ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



