ಹರಿಯಾಣ, ಮಾರ್ಚ್ 29:ಮಿತಿಮೀರಿದ ವೇಗ ಹಾಗೂ ಚಾಲಕನ ಅಜಾಗರೂಕತೆಯು ಮೂರು ಅಮಾಯಕ ಜೀವಗಳನ್ನು ಬಲಿಪಡೆದ ಭೀಕರ ಘಟನೆ ಹರಿಯಾಣದ ಪಟೌಡಿ ಸಮೀಪದ ಖೋಡ್ ಗ್ರಾಮದಲ್ಲಿ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಜ್ಜ ಹಾಗೂ ಇಬ್ಬರು ಮೊಮ್ಮಕ್ಕಳ ಮೇಲೆ ವೇಗವಾಗಿ ಬಂದ ಮಹೀಂದ್ರಾ ಥಾರ್ ವಾಹನವು ಹರಿದ ಪರಿಣಾಮ, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಸುಭಾಷ್ ಖಾನ್ (52) ಮತ್ತು ಅವರ ಮೊಮ್ಮಕ್ಕಳಾದ ಇಶಾಂತ್ (10) ಹಾಗೂ ಜೈದ್ (8) ಎಂದು ಗುರುತಿಸಲಾಗಿದೆ. ಮೂಲತಃ ರಾಜಸ್ಥಾನದ ಭಿವಾಡದವರಾದ ಇಬ್ಬರು ಮಕ್ಕಳು, ಶಾಲಾ ರಜೆಯ ಹಿನ್ನೆಲೆಯಲ್ಲಿ ಖೋಡ್ ಗ್ರಾಮದಲ್ಲಿರುವ ಅಜ್ಜನ ಮನೆಗೆ ಬಂದಿದ್ದರು. ಶುಕ್ರವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ರಾತ್ರಿ ಊಟ ಮುಗಿಸಿ ಅಜ್ಜನ ಜೊತೆ ವಾಯುವಿಹಾರಕ್ಕೆಂದು ಹೊರಟಿದ್ದಾಗ ಈ ದುರಂತ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಪ್ಪು ಬಣ್ಣದ ಥಾರ್ ವಾಹನವು ಅತ್ಯಂತ ವೇಗವಾಗಿ ಬಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರೂ ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿದ್ದಾರೆ. ಪಾದಚಾರಿಗಳಿಗೆ ಗುದ್ದಿದ ನಂತರ ವಾಹನವು ಸಮೀಪದ ವಿದ್ಯುತ್ ಕಂಬ ಹಾಗೂ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತದ ತೀವ್ರತೆಗೆ ವಾಹನದ ಮುಂಭಾಗ ಪೂರ್ಣವಾಗಿ ಜಖಂಗೊಂಡಿದೆ.
ಅಪಘಾತದ ನಂತರ ಚಾಲಕ ದೀಪಾಂಶು (25) ಸ್ಥಳದಿಂದ ಪರಾರಿಯಾಗಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಚಾಲಕನು ಮದ್ಯಪಾನ ಮಾಡಿದ್ದನೇ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯ ಮೃತದೇಹಗಳನ್ನು ಪಟೌಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಜಾಗರೂಕ ಚಾಲನೆ (BNS ಸೆಕ್ಷನ್ ಅಡಿ) ಪ್ರಕರಣ ದಾಖಲಾಗಿದೆ.