ಥಾಣೆ (ಮುಂಬೈ): ವಿವಾಹವಾದ ಕೇವಲ ನಲವತ್ತೆಂಟು ದಿನಗಳಲ್ಲಿ, ಅತ್ತೆ-ಮಾವ ಹಾಗೂ ವೈದ್ಯ ಪತಿಯ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳಲಾರದೆ ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ಸಮೀಪದ ಥಾಣೆಯ ಅಂಬರ್ನಾಥ್ನಲ್ಲಿ ನಡೆದಿದೆ. ವಿಶಾಖಾ ತಿಲ್ಕರ್ (26) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೃತಳ ಪತಿ, ವೈದ್ಯ ನಿತಿನ್ ತಿಲ್ಕರ್ನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಏಪ್ರಿಲ್ 30 ರಂದು ವಿಶಾಖಾ ಮತ್ತು ನಿತಿನ್ ತಿಲ್ಕರ್ ಅವರ ವಿವಾಹ ನಡೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆಗಾಗಿ ಅತ್ತೆ-ಮಾವಂದಿರು ಕಿರುಕುಳ ನೀಡಲು ಆರಂಭಿಸಿದ್ದರು. ಪತಿ ನಿತಿನ್ ತಿಲ್ಕರ್ ಅಂಬರ್ನಾಥ್ನಲ್ಲಿರುವ ತನ್ನ ಮನೆಯ ಒಳಗೆ ಮತ್ತು ಹೊರಗೆ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಅಳವಡಿಸಿ, ಪತ್ನಿಯ ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದನು. ಆಕೆಯ ಗೌಪ್ಯತೆಯ ಸಂಪೂರ್ಣ ಹಕ್ಕನ್ನು ಕಸಿದುಕೊಂಡು, ಡಿಜಿಟಲ್ ಜೈಲಿನಲ್ಲಿ ಇಟ್ಟಂತೆ ನಡೆಸಿಕೊಳ್ಳುತ್ತಿದ್ದನು ಎಂದು ವಿಶಾಖಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ವಿವಾಹದ ಸಮಯದಲ್ಲಿ ಹೆಣ್ಣಿನ ಕಡೆಯವರಿಂದ ಆಭರಣ ಹಾಗೂ ಹಣ ಕಡಿಮೆ ಬಂದಿದೆ ಎಂಬ ಕಾರಣಕ್ಕೆ ಅತ್ತೆ ಛಾಯಾ ಮತ್ತು ಮೈದುನ ನಿನಾದ್ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದರು. ವಿಶಾಖಾ ಯಾರೊಂದಿಗಾದರೂ ಮಾತನಾಡಿದರೆ ಪತಿ ಆಕೆಯನ್ನು ಕ್ರೂರವಾಗಿ ಥಳಿಸುತ್ತಿದ್ದನು. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಮೊದಲು, ಕೇವಲ ನೆರೆಮನೆಯ ಮಹಿಳೆಯೊಂದಿಗೆ ಮಾತನಾಡಿದ ಏಕೈಕ ಕಾರಣಕ್ಕೆ ವಿಶಾಖಾಳನ್ನು ಅತಿ ಅಮಾನುಷವಾಗಿ ಥಳಿಸಲಾಗಿತ್ತು.
ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ವಿಶಾಖಾ ಇತ್ತೀಚೆಗೆ ತನ್ನ ತಾಯಿಗೆ ಫೋನ್ ಮಾಡಿ ಅಳಲು ತೋಡಿಕೊಂಡಿದ್ದಳು. ಇದರಿಂದ ಆತಂಕಗೊಂಡ ಪೋಷಕರು ಮಗಳನ್ನು ಅಂಬರ್ನಾಥ್ನಿಂದ ತವರು ಮನೆಗೆ ವಾಪಸ್ ಕರೆತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಪೋಷಕರು ಆಕೆಯನ್ನು ರಕ್ಷಿಸಲು ತಲುಪುವಷ್ಟರಲ್ಲೇ, ಹತಾಶೆಗೊಂಡಿದ್ದ ವಿಶಾಖಾ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.
ಅಂಬರ್ನಾಥ್ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪತಿ ನಿತಿನ್ ತಿಲ್ಕರ್, ಅತ್ತೆ ಛಾಯಾ ಮತ್ತು ಸಹೋದರ ನಿನಾದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪತಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.