Connect with us

    LATEST NEWS

    ಲಡಾಖ್ ಗಡಿ ; ಚೀನಾದಿಂದ ಹತ್ತು ಭಾರತೀಯ ಯೋಧರ ಬಿಡುಗಡೆ

    ಭಾರತೀಯ ಯೋಧರನ್ನು ಹಿಡಿದಿಟ್ಟುಕೊಂಡಿತ್ತೇ ಚೀನಾ ಪಡೆ ?

    ನವದೆಹಲಿ, ಜೂನ್ 19 : ಲಡಾಖ್ ಗಡಿಯಲ್ಲಿನ ಅತಿರೇಕದ ಘಟನೆಯ ಬಳಿಕ ಚೀನಾ ಸೇನೆ ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದ ಹತ್ತು ಮಂದಿ ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದೆ. ಲಡಾಖ್ ಗಡಿಯ ಗ್ಯಾಲ್ವಾನ್ ಕಣಿವೆಯ ಹಿಂಸಾ ಘಟನೆಯ ಮೂರು ದಿನಗಳ ಬಳಿಕ ಚೀನಾ ಸೇನೆ ನಿನ್ನೆ ಸಂಜೆ 5.30ಕ್ಕೆ ನಾಲ್ಕು ಅಧಿಕಾರಿಗಳು ಸೇರಿದಂತೆ ಹತ್ತು ಮಂದಿ ಭಾರತೀಯ ಯೋಧರನ್ನು ರಿಲೀಸ್ ಮಾಡಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಉಭಯ ಸೇನೆಗಳ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ಮಾತುಕತೆಯ ಬಳಿಕ ಚೀನಾ ಸೇನೆ, ಭಾರತೀಯ ಯೋಧರನ್ನು ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ. ಅಧಿಕಾರಿಗಳ ಮಟ್ಟದ ಸಭೆಯಲ್ಲಿ ತಮ್ಮ ಯೋಧರನ್ನು ಚೀನಾ ಬಂಧಿಸಿರುವ ಕುರಿತು ಚಿತ್ರ ಸಹಿತ ಸಾಕ್ಷ್ಯಗಳನ್ನು ಭಾರತದ ಸೇನೆ ಮುಂದಿಟ್ಟಿದ್ದು ಆನಂತ್ರ ಯೋಧರನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

    ಮಿಲಿಟರಿ ಮೂಲಗಳ ಪ್ರಕಾರ, ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ 76 ಮಂದಿ ಭಾರತದ ಯೋಧರು ಗಾಯಗೊಂಡಿದ್ದಾರೆ. ಆ ಪೈಕಿ 18 ಮಂದಿ ಗಂಭೀರ ಗಾಯಗಳನ್ನು ಅನುಭವಿಸಿದ್ದರೆ, 58 ಮಂದಿ ಅಲ್ಪಮಟ್ಟಿನ ಗಾಯಗಳಿಗೆ ತುತ್ತಾಗಿದ್ದರು. ಗಂಭೀರ ಗಾಯಗಳಾಗಿರುವ 18 ಮಂದಿಗೆ ಲೇಹ್ ನಲ್ಲಿರುವ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 58 ಮಂದಿ ಯೋಧರನ್ನು ಆಸುಪಾಸಿನ ಇತರ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

    ಸೋಮವಾರ ರಾತ್ರಿ ಲಡಾಖ್ ಗಡಿಭಾಗದ ಗ್ಯಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರೆಂದು ಸೇನೆ ದೃಢಪಡಿಸಿತ್ತು. ನಿರಾಯುಧರಾಗಿದ್ದ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ದೊಣ್ಣೆ, ಮೊಳೆಗಳನ್ನು ಚುಚ್ಚಿದ್ದ ರಾಡ್ ಗಳಿಂದ ಹಲ್ಲೆ ಮಾಡಿದ್ದರು.

    ಅಂದಹಾಗೆ, ಗ್ಯಾಲ್ವಾನ್ ಕಣಿವೆಯ ಘಟನೆ 1967 ರಲ್ಲಾದ ಚೀನಾ- ಭಾರತದ ಸೇನೆಯ ನಡುವಿನ ಘರ್ಷಣೆಯ ನಂತರದ ಅತಿದೊಡ್ಡ ಕೃತ್ಯ ಎನ್ನಲಾಗುತ್ತಿದೆ. ನಾಥು ಲಾ ದಲ್ಲಿ ಆಗಿದ್ದ ಅಂದಿನ ಘಟನೆಯಲ್ಲಿ ಭಾರತದ 80 ಸೈನಿಕರು ಮಡಿದಿದ್ದರೆ, ಚೀನಾ ಪಡೆಯ 300 ಮಂದಿ ಸತ್ತಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply