ಕೊಲ್ಲೂರು ಜೂನ್ 12: ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕರಾವಳಿಯ ಧಾರ್ಮಿಕ ಪ್ರವಾಸ ಕೈಗೊಂಡಿರುವ ಸಿಎಂ ಸಿ. ಜೋಸೆಫ್ ವಿಜಯ್ ಅವರು ಶುಕ್ರವಾರ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾದರು. ದೇವಿಯ ದರ್ಶನ ಪಡೆದ ಅವರು, ಕ್ಷೇತ್ರಕ್ಕೆ ವಿಶೇಷ ಕಾಣಿಕೆಯಾಗಿ ಬರೋಬ್ಬರಿ 1 ಕೆಜಿ 600 ಗ್ರಾಂ ತೂಕದ ಭವ್ಯ ಬೆಳ್ಳಿ ಖಡ್ಗವನ್ನು ಅರ್ಪಿಸಿದ್ದಾರೆ.

ದೇವಸ್ಥಾನಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿಯವರನ್ನು ಕೊಲ್ಲೂರು ದೇವಳದ ಆಡಳಿತ ಮಂಡಳಿಯ ಟ್ರಸ್ಟಿಗಳು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಅರ್ಚಕ ವೃಂದದವರು ಮಂತ್ರಘೋಷಗಳೊಂದಿಗೆ ಗೌರವಪೂರ್ವಕವಾಗಿ ಕ್ಷೇತ್ರದೊಳಗೆ ಬರಮಾಡಿಕೊಂಡರು. ದೇವಸ್ಥಾನದ ಸಂಪ್ರದಾಯದಂತೆ ಶಲ್ಯ ಧರಿಸಿಯೇ ಒಳಪ್ರವೇಶಿಸಿದ ಸಿಎಂ ವಿಜಯ್, ಸಾಂಪ್ರದಾಯಿಕ ಶಿಷ್ಟಾಚಾರವನ್ನು ಅಚ್ಚುಕಟ್ಟಾಗಿ ಪಾಲಿಸಿದರು.

ದೇವಿಗೆ ರೇಷ್ಮೆ ಸೀರೆ, ಸಂಕಲ್ಪ ಪೂಜೆ: ದೇವಳದ ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಿಎಂ ವಿಜಯ್ ಅವರಿಗೆ ವಿಶೇಷ ಸಂಕಲ್ಪ ಪೂಜೆ ನೆರವೇರಿಸಲಾಯಿತು. ಜಗನ್ಮಾತೆಗೆ ರೇಷ್ಮೆ ಸೀರೆ ಹಾಗೂ ಫಲ-ತಾಂಬೂಲಗಳನ್ನು ಅರ್ಪಿಸಿದ ತಮಿಳುನಾಡು ಸಿಎಂ, ಗರ್ಭಗುಡಿಯ ಮುಂದೆ ಸುಮಾರು ಅರ್ಧ ಗಂಟೆಗಳ ಕಾಲ ಕಣ್ಣು ಮುಚ್ಚಿ ಮೌನ ಪ್ರಾರ್ಥನೆ ಸಲ್ಲಿಸಿದರು. ತದನಂತರ ದೇವಿಗೆ ಎಂದಿನಂತೆ ನಡೆಯುವ ನಿಯಮಿತ ಪೂಜೆ ಹಾಗೂ ದೀಪಾರಾಧನೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಮುಖ್ಯಮಂತ್ರಿಗಳ ಕೈಗೆ ರಕ್ಷಾದಾರವನ್ನು ಕಟ್ಟಿದರು.
ಸಿಎಂ ವಿಜಯ್ ಅವರು ದೇವಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ನೀಡಿರುವ ಕುರಿತು ದೇವಳದ ಟ್ರಸ್ಟ್ ಅಧ್ಯಕ್ಷರಾದ ಬಾಬು ಹೆಗಡೆ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ದೇವಸ್ಥಾನದ ವತಿಯಿಂದ ಯಾವುದೇ ಪ್ರತ್ಯೇಕ ವಿಐಪಿ ವಿಶೇಷ ಪೂಜೆಗಳಿರಲಿಲ್ಲ, ನಿಗದಿತ ಧಾರ್ಮಿಕ ವಿಧಿವಿಧಾನಗಳಂತೆಯೇ ದರ್ಶನ ಪ್ರಕ್ರಿಯೆ ಜರುಗಿತು ಎಂದು ಮೂಲಗಳು ತಿಳಿಸಿವೆ. ಪೂಜೆಯ ಬಳಿಕ ದೇವಸ್ಥಾನದ ವತಿಯಿಂದ ಪ್ರಸಾದ ಸ್ವೀಕರಿಸಿದ ವಿಜಯ್ ಕೊಲ್ಲೂರಿನಿಂದ ನಿರ್ಗಮಿಸಿದರು.