ನವದೆಹಲಿ ಮಾರ್ಚ್ 11: ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದ 31 ವರ್ಷದ ಯುವಕನಿಗೆ ಸುಪ್ರೀಂಕೋರ್ಟ್ ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಅವರ ತಂದೆ ದಯಾಮರಣಕ್ಕೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ. ಆ ಮೂಲಕ, ಚೇತರಿಕೆಯ ಭರವಸೆಯೇ ಇಲ್ಲದ ಮಗನ ವೇದನೆಯನ್ನು ನೋಡಲಾರದ ವೃದ್ಧ ಪೋಷಕರ ಕಣ್ಣೀರಿನ ಕೋರಿಕೆಗೆ ನ್ಯಾಯಾಲಯ ಸ್ಪಂದಿಸಿದೆ.

2013ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ 20 ವರ್ಷದ ಪ್ರತಿಭಾವಂತ ಯುವಕ ಹರೀಶ್ ರಾಣಾ, ತಾವು ತಂಗಿದ್ದ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ಮೆದುಳಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಅಂದಿನಿಂದ ಅವರು ಉಸಿರಾಟ ಮತ್ತು ಆಹಾರಕ್ಕಾಗಿ ಪೈಪ್ಗಳ ಸಹಾಯದಿಂದ ಹಾಸಿಗೆಯಲ್ಲೇ ಜೀವರಕ್ಷಕ ವ್ಯವಸ್ಥೆಯಡಿ ಬದುಕುತ್ತಿದ್ದರು. ಇತ್ತೀಚಿನ ವೈದ್ಯಕೀಯ ವರದಿಯ ಪ್ರಕಾರ, 13 ವರ್ಷಗಳಲ್ಲಿ ಅವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.
ನ್ಯಾಯಾಲಯದ ಮಾರ್ಮಿಕ ನುಡಿಗಳು:
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ತೀರ್ಪು ನೀಡುವಾಗ ಶೇಕ್ಸ್ಪಿಯರ್ನ ಹ್ಯಾಮ್ಲೆಟ್ನ “ಇರಬೇಕೋ ಬೇಡವೋ” (To be or not to be) ಎಂಬ ಪ್ರಸಿದ್ಧ ಸಾಲನ್ನು ಉಲ್ಲೇಖಿಸಿತು. “ವೈದ್ಯರ ಕರ್ತವ್ಯ ರೋಗಿಗೆ ಚಿಕಿತ್ಸೆ ನೀಡುವುದಾದರೂ, ಚೇತರಿಕೆಯ ಭರವಸೆಯೇ ಇಲ್ಲದಿದ್ದಾಗ ಆ ಕರ್ತವ್ಯಕ್ಕೆ ಅರ್ಥವಿರುವುದಿಲ್ಲ” ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ರಾಣಾ ಅವರ ಪೋಷಕರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ ನ್ಯಾಯಾಲಯ, “ಪ್ರೀತಿ ಎಂದರೆ ಕತ್ತಲೆಯ ಕಾಲದಲ್ಲೂ ಜೊತೆಗಿರುವುದು. ನಮ್ಮ ಇಂದಿನ ನಿರ್ಧಾರವು ಕೇವಲ ಕಾನೂನಲ್ಲ, ಅದು ಪ್ರೀತಿ ಮತ್ತು ಜೀವನದ ನಷ್ಟದ ನಡುವಿನ ಸಮತೋಲನ” ಎಂದು ಭಾವನಾತ್ಮಕವಾಗಿ ನುಡಿಯಿತು.