UDUPI
ಜನರ ಬೇಡಿಕೆಗೆ ಸ್ಪಂದಿಸಿ ರಸ್ತೆ, ಚರಂಡಿಗಳಿಗೆ ಅನುದಾನ ಬಿಡುಗಡೆ -ಪ್ರಮೋದ್ ಮಧ್ವರಾಜ್
ಜನರ ಬೇಡಿಕೆಗೆ ಸ್ಪಂದಿಸಿ ರಸ್ತೆ, ಚರಂಡಿಗಳಿಗೆ ಅನುದಾನ ಬಿಡುಗಡೆ -ಪ್ರಮೋದ್ ಮಧ್ವರಾಜ್
ಉಡುಪಿ ಫೆಬ್ರವರಿ 7: ಉಡುಪಿ ನಗರಸಭಾ ವ್ಯಾಪ್ತಿಯಡಿ ಬರುವ ಎಲ್ಲ ರಸ್ತೆಗಳನ್ನು ಕಾಂಕ್ರೀಟಿಕರಣಗೊಳಿಸುವುದು ಮತ್ತು ಸ್ಥಳೀಯ ನಾಗರೀಕರ ಮನವಿಗೆ ಸ್ಪಂದಿಸಿ ಆರ್ ಸಿ ಸಿ ಚರಂಡಿ ರಚನೆಗೆ ಎಸ್ ಎಫ್ ಸಿ ವಿಶೇಷ ಅನುದಾನದಡಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ನಗರ ಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಶಿಲಾನ್ಯಾಸವನ್ನು ನೆರವೇರಿಸಿದರು.
ಇಂದು ಸುಮಾರು 10 ಕೋಟಿ ರೂಪಾಯಿಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಿದ ಸಚಿವರಿಗೆ ಸ್ಥಳೀಯರು ಅಭಿನಂದನೆಗಳನ್ನು ತಿಳಿಸಿದರು. ಕೊಡವೂರು ವಾರ್ಡಿನ ಮಾರಿಗುಡಿಗೆ ಹೋಗುವ ಮುಖ್ಯ ರಸ್ತೆಯ ಬಳಿ ಸ್ಥಳೀಯರಾದ ಡೀನ ಅವರು ಸಚಿವರ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿ’ಯು ಆರ್ ಡುಯಿಂಗ್ ಗ್ರೇಟ್ ಜಾಬ್’ ಎಂದರು.
ಜನರ ಬೇಡಿಕೆಗಳಿಗೆ ಸ್ಪಂದಿಸಿ, ಮಳೆಯಿಂದ ನೆರೆಯುಂಟಾಗುವಲ್ಲಿ, ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಲು ಬೇಡಿಕೆ ಇರಿಸಿದ ಮನವಿಗಳಿಗೆ ಸ್ಪಂದಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕೊಡವೂರು ವಾರ್ಡಿನ ಶಂಕರ ನಾರಾಯಣ ದೇವಸ್ಥಾನದಿಂದ ಮಾರಿಗುಡಿಗೆ ಹೋಗುವ ಮುಖ್ಯ ರಸ್ತೆ ಕಾಂಕ್ರೀಟಿಕರಣಕ್ಕೆ ನಿಗದಿತ ವೇಳೆಗೆ ಮುಂಚೆಯೇ ಆಗಮಿಸಿದ ಸಚಿವರು, ಇಲ್ಲಿ ಒಟ್ಟು 20 ಲಕ್ಷ ರೂ.ಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ, ಅಲ್ಲಿನ ಮಾರಿಗುಡಿಗೆ ತೆರಳಿ ಪೂಜೆ ಸಲ್ಲಿಸಿದರು.
ಕೊಡವೂರು ವಾರ್ಡಿನ ಪಾಳೆಕಟ್ಟೆ 3ನೇ ಅಡ್ಡರಸ್ತೆ ಕಾಂಕ್ರೀಟಿಕರಣ ನೆರವೇರಿಸಿ ಅಲ್ಲೇ ಪಕ್ಕದಲ್ಲಿ ಬಾವಿ ಶುದ್ದೀಕರಣದ ಕಾಮಗಾರಿಯನ್ನು ನೆನಪಿಸಿಕೊಂಡು ಪರಿಶೀಲನೆ ನಡೆಸಿದರು. ಬಡವರಿಗಾಗಿ ದಾನಿಗಳ ನೆರವಿನಿಂದ ನಿರ್ಮಾಣ ಮಾಡಿ ಹಸ್ತಾಂತರಿಸಿದ ಮನೆಯನ್ನೂ ನೆರದವರಿಗೆ ತೋರಿಸಿದರು. ಕೊಡವೂರು, ವಡಭಾಂಡೇಶ್ವರ ವಾರ್ಡಿನ ಹೆಚ್ಚಿನ ಎಲ್ಲ ರಸ್ತೆಗಳು ಕಾಂಕ್ರೀಟಿಕರಣಗೊಂಡಿದ್ದು ಕೆಲವು ರಸ್ತೆಗಳಷ್ಟೆ ಸಂಪೂರ್ಣಗೊಳ್ಳಲು ಬಾಕಿಯಿದೆ.
ಕಲ್ಮಾಡಿ ವಾರ್ಡಿನ ಬಳಿ ಸ್ಥಳೀಯ ಮಹಿಳೆಯರು ರಸ್ತೆಯನ್ನು ತಮ್ಮ ಮನೆಯವರೆಗೆ ವಿಸ್ತರಿಸಲು ಸಚಿವರಲ್ಲಿ ಮನವಿ ಮಾಡಿಕೊಂಡರು. ಹಂತ ಹಂತವಾಗಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ಸಚಿವರು ನೀಡಿದರು. ಇದೇ ಸಂದರ್ಭದಲ್ಲಿ ಪಡುಕೆರೆ ಬೀಚ್ ಬಳಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಹಾಗೂ ಬೀಚ್ ಬಳಿ ಮೂಲಸೌಕರ್ಯ ಕಾಮಗಾರಿಗಳ ಪರಿಶೀಲನೆಯನ್ನೂ ನಡೆಸಿದರು. ಕಾಮಗಾರಿಗಳಿಗೆ ಗುತ್ತಿಗೆ ನೀಡಿಯಾದ ಬಳಿಕವೂ ಕೆಲಸ ಆರಂಭಿಸದೆ ಇರುವವರ ಪಟ್ಟಿಯನ್ನು ತಕ್ಷಣವೇ ಸಲ್ಲಿಸಲು ಸಚಿವರು ಪೌರಾಯುಕ್ತರಿಗೆ ಸೂಚನೆ ನೀಡಿದರು.
You must be logged in to post a comment Login