ಕೊಳ್ಳೇಗಾಲ ಫೆಬ್ರವರಿ 02: ಮದುವೆ ಮನೆಗೆ ಬರುತ್ತಿದ್ದ ವರನಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವರನಿಗೆ ಚಾಕು ಇರಿಯಲು ಸುಫಾರಿ ಕೊಟ್ಟಿದ್ದೆ ವಧು ಎಂದು ತಿಳಿದು ಬಂದಿದ್ದು, ಇದೀಗ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ದರ್ಶನ್, ಮಿಥುನ್ ಹಾಗೂ ವಧು ನಯನಾ ಬಂಧಿತ ಆರೋಪಿಗಳು. ಕೃತ್ಯಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಪತ್ತೆಗೆ ಶೋಧ ನಡೆಯುತ್ತಿದೆ.
ಮೊದಲ ಆರೋಪಿ ದರ್ಶನ್ ತಮಟೆ ಬಾರಿಸುವ ಹಾಗೂ ಪುಸ್ತಕ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು ಎರಡು ವರ್ಷಗಳಿಂದ ನಯನಾಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಇದರ ನಡುವೆಯೂ ನಯನಾಗೆ ಕುಣಗಳ್ಳಿ ಗ್ರಾಮದ ರವೀಶ್ ಜೊತೆ ವಿವಾಹ ನಿಶ್ಚಯವಾಗಿತ್ತು. ಇದಾದ ಬಳಿಕ ರವೀಶ್ನ ಮೊಬೈಲ್ ನಂಬರ್ ಅನ್ನು ಆರೋಪಿ ದರ್ಶನ್ಗೆ ನೀಡಿ ಬೆದರಿಕೆ ಹಾಕಿ ಮದುವೆ ನಿಲ್ಲಿಸುವಂತೆ ನಯನಾ ಒತ್ತಡ ಹೇರಿದ್ದಳು.
ಅದರಂತೆ ಮದುವೆ ದಿನ ರವೀಶ್ ಮಂಟಪಕ್ಕೆ ಬರುವಾಗ ದರ್ಶನ್ ಹಾಗೂ ಇತರರು ಅಡ್ಡಗಟ್ಟಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಚೂರಿ ಇರಿದ ಬಳಿಕ ಮದುವೆ ಮುರಿದು ಬಿದ್ದಿತ್ತು. ಇದಾದ ಬಳಿಕವೂ ಆರೋಪಿ ನಯನಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವರ ದರ್ಶನ್ನನ್ನು ಭೇಟಿಯಾಗಿ ಮದುವೆಯಾಗುವಂತೆ ಮನವೊಲಿಸುವ ನಾಟಕ ಮಾಡಿ ಪ್ರಾಣ ಕಳೆದುಕೊಳ್ಳುವುದಾಗಿ ಕಣ್ಣೀರು ಹಾಕಿದ್ದಳು.
ಪ್ರಕರಣವನ್ನು ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ವಿಶೇಷ ತಂಡ ರಚನೆ ಮಾಡಿದ್ದರು. ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ, ಇನ್ಸ್ಪೆಕ್ಟರ್ ಶಿವಮಾದಯ್ಯ, ಪಿಎಸ್ಐ ವರ್ಷಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.