KARNATAKA
ಇಂದು ಮಧ್ಯಾಹ್ನ 3:30ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
ಬೆಂಗಳೂರು, ಆಗಸ್ಟ್ 09: ಮೂರು ವಾರಗಳ ಹಿಂದೆ ನಡೆಸಲಾಗಿದ್ದ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 8.71 ಲಕ್ಷ ವಿದ್ಯಾರ್ಥಿಗಳ ಹಣೆಬರಹ ತಿಳಿಯಲಿದೆ. ಇಂದು ಮಧ್ಯಾಹ್ನ ಮತ್ತು ಸಂಜೆಯ ಒಳಗೆ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಲಿದೆ. ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸುದ್ದಿಗೋಷ್ಠಿ ಕರೆದು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ರಾಜ್ಯ 10ನೇ ತರಗತಿ ಫಲಿತಾಂಶವನ್ನು ನೇರವಾಗಿ ಫಲಿತಾಂಶವನ್ನು KB.KAR.NIC.IN ಅಥವಾ KARRESULTS.NIC.IN ವೆಬ್ ಸೈಟ್ಗಳಲ್ಲಿ ಪಡೆಯಬಹುದು. ಇಂದು ಸಂಜೆಯೇ ಈ ಜಾಲತಾಣಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಜುಲೈ 19 ಮತ್ತು 22ರಂದು ಎರಡೇ ದಿನದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನ ನಡೆಸಲಾಗಿತ್ತು. ಒಟ್ಟು 8.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜುಲೈ 19ರಂದು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆಯಾಗಿತ್ತು. ಜುಲೈ 22ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ಒಂದೇ ದಿನದಲ್ಲಿ ಮೂರು ವಿಷಯಗಳಿಗೆ ಪರೀಕ್ಷೆ ಇದ್ದರಿಂದ ಪ್ರತೀ ಪ್ರಶ್ನೆಪತ್ರಿಕೆಯೂ ಬಹು ಆಯ್ಕೆ ಉತ್ತರಗಳೊಂದಿಗೆ (Multi choice answers) 40 ಅಂಕಗಳನ್ನ ಹೊಂದಿತ್ತು.
ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಫಲಿತಾಂಶ ಪ್ರಕಟಣೆಗೆ ಸಕಲ ತಯಾರಿ ಮುಗಿದಿದೆ. ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಅದರಂತೆಯೇ ಇಂದು ಆಗಸ್ಟ್ 9ರಂದು ರಿಸಲ್ಟ್ ಅನೌನ್ಸ್ ಆಗುತ್ತಿದೆ. ಮಾಜಿ ಸಚಿವ ಸುರೇಶ್ ಕುಮಾರ್ ನಿನ್ನೆ ತಮ್ಮ ಫೇಸ್ಬುಕ್ನಲ್ಲಿ ಇದೇ ವಿಚಾರವನ್ನು ಹಂಚಿಕೊಂಡು ಸಮಾಧಾನ ವ್ಯಕ್ತಪಡಿಸಿದ್ದರು.
You must be logged in to post a comment Login