ಪಾಟ್ನಾ/ಬೆಂಗಳೂರು, ಮಾರ್ಚ್ 19: ಯುಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗ ಅಭ್ಯರ್ಥಿ ಪಡೆದಿದ್ದ ರ್ಯಾಂಕ್ ತನ್ನದೇ ಎಂದು ಸುಳ್ಳು ಹೇಳಿ ಸನ್ಮಾನ ಪಡೆದುಕೊಂಡಿದ್ದ ಬಿಹಾರದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಶೇಖ್ಪುರ ಜಿಲ್ಲೆಯ ರಂಜೀತ್ ಕುಮಾರ್ ಎಂಬಾತ, 2025ರ ಯುಪಿಎಸ್ಸಿ ಫಲಿತಾಂಶದಲ್ಲಿ 440ನೇ ರ್ಯಾಂಕ್ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದ. ಮಾ.6ರಂದು ಫಲಿತಾಂಶ ಪ್ರಕಟವಾದ ಬಳಿಕ ಸ್ಥಳೀಯರು, ಸಾರ್ವಜನಿಕರು ಹಾಗೂ ಮಾಜಿ ಆರ್ಜೆಡಿ ಶಾಸಕ ವಿಜಯ್ ಸಾಮ್ರಾಟ್ ಸೇರಿದಂತೆ ಹಲವರು ಅವನನ್ನು ಅಭಿನಂದಿಸಿ ಸನ್ಮಾನಿಸಿದ್ದರು.
ಆದರೆ ನಂತರ ಯುಪಿಎಸ್ಸಿ ಅಧಿಕೃತ ಫಲಿತಾಂಶವನ್ನು ಪರಿಶೀಲಿಸಿದಾಗ ನಿಜಾಂಶ ಬಯಲಾಗಿದೆ. 440ನೇ ರ್ಯಾಂಕ್ ವಾಸ್ತವದಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಮೂಲದ ರಂಜಿತ್ ಕುಮಾರ್ ಆರ್ ಅವರಿಗೆ ಸೇರಿದ್ದು, ಬಿಹಾರದ ರಂಜೀತ್ ಕುಮಾರ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ವಿಷಯ ಬೆಳಕಿಗೆ ಬಂದ ಬಳಿಕ ಪೊಲೀಸರು ಆರೋಪಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವನು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾಣೆಯಾಗಿದ್ದ. ಬಳಿಕ ವಿಶೇಷ ಶೋಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ತಪ್ಪು ಮಾಹಿತಿ ನೀಡಿ ಜನರನ್ನು ಮರುಳುಗೊಳಿಸಿದ ಆರೋಪದಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಕೂಡ ಇಂತಹ ಘಟನೆ ವರದಿಯಾಗಿದ್ದು, ಭೋಜ್ಪುರದ ಆಕಾಂಕ್ಷಾ ಸಿಂಗ್ 301ನೇ ರ್ಯಾಂಕ್ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದರು. ಬಳಿಕ ಯುಪಿಎಸ್ಸಿ ಸ್ಪಷ್ಟಪಡಿಸಿದ್ದು, ಆ ರ್ಯಾಂಕ್ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಮತ್ತೊಬ್ಬ ಅಭ್ಯರ್ಥಿಗೆ ಸೇರಿದೆ ಎಂದು ತಿಳಿಸಿತ್ತು.